
ಮಂಗಳೂರು : ರಾಜ್ಯದ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಇದೆಯೇ ಎಂಬ ಪ್ರಶ್ನೆಗೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಅತ್ಯಂತ ಚತುರತೆಯಿಂದ ಮತ್ತು ಕುತೂಹಲಕಾರಿ ಉತ್ತರ ನೀಡಿದ್ದಾರೆ.
ಸಿಎಂ ಸ್ಥಾನದ ಬಗ್ಗೆ ಸ್ಪಷ್ಟನೆ:
ಮಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನನಗೆ ಮುಖ್ಯಮಂತ್ರಿಯಾಗಲು ಯಾವುದೇ ಅರ್ಜೆಂಟ್ ಇಲ್ಲ. ಇನ್ನೂ 20 ವರ್ಷಗಳ ಬಳಿಕ, ಮತದಾರರು ನನ್ನನ್ನು ಸತತವಾಗಿ 4 ಬಾರಿ ಗೆಲ್ಲಿಸಿ ಕಳುಹಿಸಿದ ನಂತರ ಆ ಬಗ್ಗೆ ನೋಡೋಣ,” ಎಂದು ನಗುತ್ತಲೇ ಉತ್ತರಿಸಿದರು.
ಬಳ್ಳಾರಿ ಗಲಾಟೆ ಬಗ್ಗೆ ಅಸಮಾಧಾನ:
ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಶಾಸಕರ ನಡುವಿನ ಸಂಘರ್ಷದ ಕುರಿತು ಮಾತನಾಡಿದ ಖಾದರ್, “ಜನಪ್ರತಿನಿಧಿಗಳು ಸಿನಿಮೀಯ ರೀತಿಯಲ್ಲಿ ಬೀದಿಯಲ್ಲಿ ಕಚ್ಚಾಡುವುದು ಸರಿಯಲ್ಲ. ಕೆಲವೇ ಕೆಲವು ಜನಪ್ರತಿನಿಧಿಗಳ ಇಂತಹ ನಡವಳಿಕೆಯಿಂದಾಗಿ ಸಾರ್ವಜನಿಕರು ಎಲ್ಲರನ್ನೂ ಅದೇ ದೃಷ್ಟಿಕೋನದಲ್ಲಿ ನೋಡುವಂತಾಗುತ್ತದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಕೋಳಿ ಅಂಕಕ್ಕೆ ಹೊಸ ನಿಯಮ:
ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕೋಳಿ ಅಂಕಕ್ಕೆ ಎದುರಾಗಿರುವ ಕಾನೂನು ತೊಡಕುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಸಮಸ್ಯೆ ನಿವಾರಣೆಗೆ ಸೂಕ್ತ ನಿಯಮ ರೂಪಿಸುವ ಅಗತ್ಯವಿದೆ. ನಾನು ಕೂಡ ಈ ಬಗ್ಗೆ ಸರ್ಕಾರಕ್ಕೆ ಮಹತ್ವದ ಸಲಹೆಗಳನ್ನು ನೀಡಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ,” ಎಂದು ಭರವಸೆ ನೀಡಿದರು.



































