
ಮಂಗಳೂರು : ಮಂಗಳೂರಿನಲ್ಲಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಡಾ. ಅರುಣ್ ಅವರು ಗಂಭೀರ ವಾರ್ನಿಂಗ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಎಎಸ್ಐ, ಹೆಡ್ಕಾನ್ಸ್ಟೇಬಲ್ ಹಾಗೂ ಪಿಸಿಗಳ ಸಂಪೂರ್ಣ ವಿವರವನ್ನು ಮೇ 31ರಂದು ಸಂಜೆ 4 ಗಂಟೆಯೊಳಗೆ ಎಸ್ಪಿ ಕಚೇರಿಗೆ ನೀಡುವಂತೆ ಎಲ್ಲಾ ಠಾಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಾಹಿತಿಯಲ್ಲಿ ತಪ್ಪು ಕಂಡುಬಂದರೆ, ಸಂಬಂಧಿತ ಠಾಣಾಧಿಕಾರಿ ಅಥವಾ ಬರಹಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇದಲ್ಲದೇ, ವರ್ಗಾವಣೆಯಾದರೂ ಮತ್ತೆ ಅದೇ ಠಾಣೆಯಲ್ಲಿ ಸೇವೆ ನಿರ್ವಹಿಸುತ್ತಿರುವವರು, ಪ್ರಮೋಷನ್ ನಂತರ ಕೂಡಾ ಹಳೆ ಠಾಣೆಯಲ್ಲೇ ಮುಂದುವರೆದವರು, ಪತಿ-ಪತ್ನಿ ಇಬ್ಬರೂ ಸರಕಾರಿ ನೌಕರರಾಗಿದ್ದರೆ ಅವರ ಮಾಹಿತಿ, ಹಾಗೆಯೇ ನಿವೃತ್ತಿಗೆ 2 ವರ್ಷದೊಳಗೆ ಇರುವ ಸಿಬ್ಬಂದಿಯ ವಿವರಗಳನ್ನು ಕೂಡಾ ಸಲ್ಲಿಸುವಂತೆ ಸೂಚಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಪೊಲೀಸ್ ವರ್ಗಾವಣೆ ಸೇರಿದಂತೆ ಸಂಯೋಜನೆ ಗೊಂದಲದ ವಿಚಾರಗಳು ಪ್ರಚಲಿತದಲ್ಲಿದ್ದು , ಇದೀಗ ಉಡುಪಿ ಎಸ್ಪಿಯಾಗಿ ಜನಪ್ರಿಯತೆ ಗಳಿಸಿದ್ದ ಡಾ. ಅರುಣ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಮೊದಲ ದಿನವೇ ತೆಗೆದುಕೊಂಡ ಕಠಿಣ ನಿರ್ಧಾರಗಳಿಂದ ಇಲಾಖೆಯೊಳಗಿನ ಶಿಸ್ತು ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ ಮತ್ತು ವ್ಯಾಪಕ ಕುತೂಹಲಕ್ಕೂ ಕಾರಣವಾಗಿದೆ..