
ಬೆಂಗಳೂರು : ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳ ಕುರಿತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದ 12 ತಜ್ಞರ ತಂಡವು ನಡೆಸಿದ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯ ಪ್ರಮುಖ ಅಂಶವೆಂದರೆ, ಶೇ. 50ಕ್ಕಿಂತ ಹೆಚ್ಚು ಹೃದಯಾಘಾತ ಪ್ರಕರಣಗಳು ಧೂಮಪಾನಿಗಳಲ್ಲಿ ಕಂಡುಬಂದಿರುವುದು.
ತಜ್ಞರ ವರದಿಯ ಪ್ರಕಾರ, ಯುವಕರಲ್ಲಿ ಹೃದಯಾಘಾತಕ್ಕೆ ಧೂಮಪಾನವೇ ಪ್ರಮುಖ ಕಾರಣ ಎಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ನಿಷೇಧದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಡಾ. ರವೀಂದ್ರನಾಥ್ ಅವರು, 250 ಜನರ ಮೇಲೆ ನಡೆಸಿದ ಅಧ್ಯಯನದ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ. 98ರಷ್ಟು ಮಂದಿ ಕೋವಿಡ್ ಲಸಿಕೆ ಪಡೆದಿದ್ದರು. ಆದರೆ, ಮಧುಮೇಹ, ಒತ್ತಡ, ಧೂಮಪಾನ ಮತ್ತು ಬೊಜ್ಜು (ಒಬೆಸಿಟಿ) ನಂತಹ ಜೀವನಶೈಲಿ ಸಂಬಂಧಿ ಕಾರಣಗಳು ಹೃದಯಾಘಾತಕ್ಕೆ ಮುಖ್ಯವಾಗಿವೆ. ಕೋವಿಡ್ ಲಸಿಕೆಗೂ ಹೃದಯಾಘಾತಕ್ಕೂ ಯಾವುದೇ ನೇರ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಟ್ಟು 251 ರೋಗಿಗಳ ಆರೋಗ್ಯ ತಪಾಸಣೆಯಲ್ಲಿ, 218 ಪುರುಷರು ಮತ್ತು 33 ಮಹಿಳೆಯರು ಸೇರಿದ್ದರು. ಇವರಲ್ಲಿ 87 ಮಂದಿಗೆ ಮಧುಮೇಹ, 102 ಮಂದಿಗೆ ರಕ್ತದೊತ್ತಡ, 35 ಮಂದಿಗೆ ಸಕ್ಕರೆ ಕಾಯಿಲೆ, 40 ಮಂದಿಗೆ ಹೃದಯ ಸಂಬಂಧಿ ಸಮಸ್ಯೆಗಳು, ಮತ್ತು 111 ಮಂದಿ ಧೂಮಪಾನಿಗಳಾಗಿದ್ದರು. 19 ಮಂದಿಗೆ ಕೋವಿಡ್ ಸೋಂಕಿನ ಇತಿಹಾಸವಿದ್ದರೂ, 77 ಮಂದಿಗೆ ಯಾವುದೇ ರೋಗಗಳು ಇರಲಿಲ್ಲ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.
ಪ್ರಸ್ತುತ, ನರವೈಜ್ಞಾನಿಕ (ನ್ಯೂರಾಲಜಿಕಲ್) ಸಮಸ್ಯೆಗಳ ಕುರಿತ ಅಧ್ಯಯನವು ನಿಮಾನ್ಸ್ (NIMHANS) ತಜ್ಞರಿಂದ ನಡೆಯುತ್ತಿದ್ದು, ಅವರ ವರದಿ ಬಂದ ಬಳಿಕ ಹೃದಯಾಘಾತಗಳ ಕುರಿತಾದ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಧ್ಯಯನದ ಪ್ರಕಾರ ಹೃದಯಾಘಾತಕ್ಕೆ ಪ್ರಮುಖ ಕಾರಣಗಳು:
- ಅತಿಯಾದ ಮೊಬೈಲ್ ಬಳಕೆ (ಪರೋಕ್ಷ ಸಂಬಂಧವಿರಬಹುದು)
- ಧೂಮಪಾನ
- ಮಧುಮೇಹ
- ಅತಿಯಾದ ಬೊಜ್ಜು (ಒಬೆಸಿಟಿ)
- ಹೆಚ್ಚಿದ ತೂಕ
- ರಕ್ತದೊತ್ತಡ
- ಒತ್ತಡಯುಕ್ತ ಜೀವನಶೈಲಿ
- ಕೋವಿಡ್ ಸಂದರ್ಭದ ಔಷಧ ಬಳಕೆ (ಇದು ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಹೊರತು ಲಸಿಕೆ ಅಲ್ಲ)