
ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ ಉಡುಪಿ ತಾಲೂಕಿನಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಆನಂದ್ ಸುವರ್ಣರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಶ್ರೀ ಆನಂದ್ ಸುವರ್ಣ, ಇಂದಿನ ದಿನಗಳಲ್ಲಿ ಕುಟುಂಬದ ಆದಾಯವನ್ನು ಉತ್ತಮಗೊಳಿಸಬೇಕಾದರೆ ಮಾಡುತ್ತಿರುವ ಸ್ವಉದ್ಯೋಗವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಕುಟುಂಬದ ಖರ್ಚು ವೆಚ್ಚಗಳನ್ನು ಸರಿಯಾಗಿ ನಿಭಾಯಿಸಬಹುದು. ಆದಾಯಕ್ಕಿಂತ ಖರ್ಚು ಜಾಸ್ತಿ ಆಗುತ್ತಿರುವ ಈ ದಿನಗಳಲ್ಲಿ, ಕೈಗೊಂಡಿರುವ ಸ್ವಉದ್ಯೋಗವನ್ನು ಅಭಿವೃದ್ಧಿಪಡಿಸಿ ಬೆಳೆಸುವ ದೃಷ್ಟಿಕೋನ ಇಟ್ಟುಕೊಂಡು ಇವತ್ತಿನ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ರುಡ್ಸೆಟ್ ನಿರ್ದೇಶಕರಾದ ಡಾ. ಬೊಮ್ಮಾಯಿಯವರು ಸ್ವ ಉದ್ಯೋಗಕ್ಕೆ ಬೇಕಾದ ಪೂರಕವಾದ ಮಾಹಿತಿಯನ್ನು ಒದಗಿಸಿದರು. ಈ ಸಂದರ್ಭದಲ್ಲಿ ಸಿಡ್ಬಿ ಯೋಜನಾಧಿಕಾರಿ ಶ್ರೀ ಪ್ರವೀಣ್ ರವರು ಸಿಡ್ಬಿ ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರೆ, ಜಿಲ್ಲಾ ನಿರ್ದೇಶಕರಾದ ಶ್ರೀ ನಾಗರಾಜ್ ಶೆಟ್ಟಿಯವರು ಕೂಡ ಸಿಡ್ಬಿ ಸಾಲಕ್ಕೆ ಪೂರಕವಾಗಿ ಉತ್ತಮ ಮಾಹಿತಿಯನ್ನು ನೀಡಿದರು.
ಈ ಮಹತ್ವದ ಕಾರ್ಯಾಗಾರದಲ್ಲಿ ಒಟ್ಟು 53 ಮಂದಿ ಸ್ವ ಉದ್ಯೋಗ ಮಾಡುತ್ತಿರುವ ಫಲಾನುಭವಿಗಳು ಭಾಗವಹಿಸಿದ್ದರು. ಈ ಪೈಕಿ 34 ಫಲಾನುಭವಿಗಳಿಂದ ಸಾಲದ ಬೇಡಿಕೆಯನ್ನು ಪಡೆದುಕೊಳ್ಳಲಾಯಿತು.



































