
ಕಾರ್ಕಳ: ತಾಲೂಕಿನ ಕಡ್ತಲ ಗ್ರಾಮದ ಸಿರಿಬೈಲು ಶ್ರೀ ಬರ್ಭರೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಜೀರ್ಣೋದ್ದಾರಗೊಂಡ ನಾಗ ಸಾನಿಧ್ಯದ ಚಿತ್ರಕೂಟ ಸಹಿತ ಶಿಲಾಮಯ ಪೀಠದಲ್ಲಿ ಶ್ರೀ ನಾಗದೇವರ ಬಿಂಬ ಪುನರ್ ಪ್ರತಿಷ್ಠಾಪನೆ, ಶ್ರೀ ಧೂಳಿಮಂಡಲ ಸೇವೆ ಹಾಗೂ ಬ್ರಹ್ಮಕಲಶೋತ್ಸವವು ದಿನಾಂಕ 04-03-2026ರಿಂದ 06-03-2026ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ವಿಧಿವಿಧಾನಗಳ ಸಂಪೂರ್ಣ ವಿವರ ಹೀಗಿದೆ:
ದಿನಾಂಕ: 04-03-2026, ಬುಧವಾರ
ಧಾರ್ಮಿಕ ಕಾರ್ಯಕ್ರಮಗಳ ಮೊದಲ ದಿನವಾದ ಬುಧವಾರ ಸಂಜೆ 5.00 ಗಂಟೆಯಿಂದ ಋತ್ವಿಜರ ಸ್ವಾಗತದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಳಿಕ ವಾಸ್ತು ಪ್ರಕ್ರಿಯೆಗಳು, ಬಿಂಬಶುದ್ಧಿ ಹಾಗೂ ನಾಗಬಿಂಬಾಧಿವಾಸ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ.
ದಿನಾಂಕ: 05-03-2026, ಗುರುವಾರ
ಗುರುವಾರ ಬೆಳಿಗ್ಗೆ 8.00 ಗಂಟೆಯಿಂದ ಪುಣ್ಯಾಹ ನಾಂದಿ, ಗಣಯಾಗ, ನವಗ್ರಹ ಯಾಗ, ಪ್ರತಿಷ್ಠಾ ಪ್ರಧಾನ ಯಾಗ, ಪ್ರಾಯಶ್ಚಿತ್ತ ಹೋಮ, ತಿಲಹೋಮ, ಪವಮಾನ ಹೋಮ ಹಾಗೂ ಕೂಷ್ಮಾಂಡ ಸೂಕ್ತ ಯಾಗಗಳು ನಡೆಯಲಿವೆ.
ಪುನರ್ ಪ್ರತಿಷ್ಠಾಪನೆ: ಬೆಳಿಗ್ಗೆ 11.20ರ ವೃಷಭ ಲಗ್ನದ ಸುಮುಹೂರ್ತದಲ್ಲಿ ಚಿತ್ರಕೂಟ ಯುಕ್ತ ಶಿಲಾಮಯ ಪೀಠದಲ್ಲಿ ಶ್ರೀ ನಾಗದೇವರ ಬಿಂಬ ಪುನರ್ ಪ್ರತಿಷ್ಠಾಪನೆ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಪ್ರಾಯಶ್ಚಿತ್ತ ಕಲಶಾಭಿಷೇಕ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಬ್ರಾಹ್ಮಣ ಸುವಾಸಿನೀ ಆರಾಧನೆ ಹಾಗೂ ವಟುಕನ್ನಿಕಾರಾಧನೆ ನಡೆಯಲಿದೆ.
ಅನ್ನಸಂತರ್ಪಣೆ ಮತ್ತು ಭಜನೆ: ಮಧ್ಯಾಹ್ನ 1.00 ಗಂಟೆಯಿಂದ ರಾತ್ರಿಯವರೆಗೆ ನಿರಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಇದೇ ವೇಳೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಾಣಿಲ ಶ್ರೀಗಳ ಆಶೀರ್ವಚನ: ಸಂಜೆ 4.30ಕ್ಕೆ ಶ್ರೀಧಾಮ ಮಾಣಿಲದ ಯೋಗಿ ಕೌಸ್ತುಬ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಗಮಿಸಲಿದ್ದು, ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುವುದು. ಬಳಿಕ ಶ್ರೀಗಳು ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ.
ಶ್ರೀ ಧೂಳಿಮಂಡಲ ನರ್ತನ ಸೇವೆ: ಸಂಜೆ 6.00 ಗಂಟೆಯಿಂದ ಪ್ರಾಚೀನ ಪದ್ಧತಿಯ ನಾಗಾಧಿಪತಿ ಯಕ್ಷೀ ತನುತರ್ಪಣಾ ಆರಾಧನೆ ಸಹಿತ ಸಾಂಪ್ರದಾಯಿಕ ದೀಪಾಲಂಕಾರದಲ್ಲಿ “ಶ್ರೀ ಧೂಳಿಮಂಡಲ ನರ್ತನ ಸೇವೆ” ನಡೆಯಲಿದೆ. ವಿದ್ವಾನ್ ಶ್ರೀ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಯವರ ನೇತೃತ್ವದಲ್ಲಿ ಮಂಡಲ ಪೂಜೆ, ವೇದಮೂರ್ತಿ ಶ್ರೀ ರಾಮಚಂದ್ರ ಕುಂಜಿತ್ತಾಯ ಕಲ್ಲಂಗಳ ಇವರಿಂದ ನಾಗಪಾತ್ರಿ ಸೇವೆ ಹಾಗೂ ಶ್ರೀ ಕೃಷ್ಣಪ್ರಸಾದ್ ವೈದ್ಯ ಮುದ್ದೂರು ಮತ್ತು ಬಳಗದಿಂದ ವೈದ್ಯಮೇಳ ಜರುಗಲಿದೆ. ಇದೇ ವೇಳೆ 108 ಕಲಶಾಲವಾನ ಪ್ರಧಾನಯಾಗವೂ ನಡೆಯಲಿದೆ.
ದಿನಾಂಕ: 06-03-2026, ಶುಕ್ರವಾರ
ಶುಕ್ರವಾರ ಬೆಳಿಗ್ಗೆ 8.00 ಗಂಟೆಯಿಂದ ನಾಗಸನ್ನಿಧಿಯಲ್ಲಿ ಸರ್ಪತ್ರಯ ಹೋಮ, 108 ಕಲಶಾಭಿಷೇಕ, ಆಶ್ಲೇಷಾ ಬಲಿ ನಡೆಯಲಿದೆ. ಇದೇ ವೇಳೆ ಶ್ರೀ ಬರ್ಭರೇಶ್ವರ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿಯೂ ಕಲಶಾಭಿಷೇಕ ನೆರವೇರಲಿದೆ.
ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, ಬ್ರಾಹ್ಮಣ ಸುವಾಸಿನೀ ಹಾಗೂ ವಟುಕನ್ನಿಕಾರಾಧನೆಯೊಂದಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 1.00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.



































