
ಉಡುಪಿ : ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಬೀಸಿದ ಭೀಕರ ಸುಳಿಗಾಳಿ ಯರ್ಲಪಾಡಿ ಗ್ರಾಮದ ಜಾರ್ಕಳ ಅರ್ಬಿ ಪ್ರದೇಶದಲ್ಲಿ ಭಾರಿ ಹಾನಿ ಉಂಟುಮಾಡಿದೆ. ಈ ಅನಿರೀಕ್ಷಿತ ಪ್ರಕೃತಿ ವಿಕೋಪದಿಂದಾಗಿ ಹತ್ತಾರು ಮನೆಗಳು, ವಿದ್ಯುತ್ ಕಂಬಗಳು ಹಾಗೂ ಕೃಷಿ ತೋಟಗಳಿಗೆ ತೀವ್ರ ಹಾನಿಯಾಗಿದೆ.

ವ್ಯಾಪಕ ಹಾನಿ: ವಾಹನ ಸಂಚಾರಕ್ಕೆ ಅಡಚಣೆ
ಸುಳಿಗಾಳಿಯ ಆರ್ಭಟಕ್ಕೆ ಹತ್ತಾರು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ. ಇದರ ಜೊತೆಗೆ ತೆಂಗು, ಅಡಿಕೆ ಮತ್ತು ಬಾಳೆ ತೋಟಗಳು ಸಂಪೂರ್ಣ ನಾಶವಾಗಿವೆ. ಇದರಿಂದಾಗಿ ರೈತರಿಗೆ ಭಾರಿ ಆರ್ಥಿಕ ನಷ್ಟ ಸಂಭವಿಸಿದೆ. ಅಲ್ಲದೆ, ಹಲವಾರು ಕಡೆ ಮರಗಳು ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಘಟನೆ ನಡೆದ ಕೂಡಲೇ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮ ಆಡಳಿತ ಅಧಿಕಾರಿಗಳು, ವಿದ್ಯುತ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.






































