
ಉಡುಪಿ ಜಿಲ್ಲೆಯ ಬೆಳ್ಮಣ್ ಹತ್ತಿರದ ನಂದಳಿಕೆಯಲ್ಲಿ ನಡೆಯುವ ಮಹಾಲಿಂಗೇಶ್ವರ ದೇವಾಲಯದ ಸಿರಿ ಜಾತ್ರೆ ಪ್ರಚಾರಕ್ಕಾಗಿ ಪ್ರತೀ ವರ್ಷವೂ ವಿಭಿನ್ನ ತಂತ್ರ ಜಾರಿ ಮಾಡುವ ಸುಹಾಸ್ ಹೆಗ್ಡೆ ಅವರು ಈ ಬಾರಿಯೂ ವಿಶಿಷ್ಟ ಕ್ರಮವೊಂದನ್ನು ಅಳವಡಿಸಿದ್ದಾರೆ.
ಏಪ್ರಿಲ್ 12ರಂದು ನಡೆಯಲಿರುವ ಸಿರಿ ಜಾತ್ರೆಗಾಗಿ ಈ ಬಾರಿ “ಸೆಲ್ಸಿ ಪಾಯಿಂಟ್” ಎಂಬ ಆಕರ್ಷಕ ಆಧ್ಯಾತ್ಮ–ಡಿಜಿಟಲ್ ಸಂಯೋಜನೆಯ ಪ್ರಚಾರ ರೂಪುಗೊಂಡಿದೆ. ದೇವಸ್ಥಾನದ ಗೋಪುರದ ಆಕಾರದ ಕಟೌಟ್ ತಯಾರಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ — ಬಸ್ಸು ನಿಲ್ದಾಣ, ಅಂಗಡಿಗಳ ಮುಂಭಾಗ ಸೇರಿದಂತೆ ಜನಸಂಚಾರದ ಪ್ರಮುಖ ಕಡೆಗಳಲ್ಲಿ ಇಡಲಾಗುತ್ತಿದೆ.
ಈ ಕಟೌಟ್ ಮುಂದೆ ನಿಂತು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿದ್ದು, ಅತ್ಯುತ್ತಮ ಚಿತ್ರಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.
ಈ ಹಿಂದೆ ನಂದಳಿಕೆ ಸಿರಿ ಜಾತ್ರೆಯ ಪ್ರಚಾರ ಮೈಲುಗಲ್ಲು, ಭತ್ತದ ಗೋಣಿ, ಹಕ್ಕಿಗಳಿಗೆ ಮಣ್ಣಿನ ಪಾತ್ರೆ, ಅಂಚೆ ಕಾರ್ಡ್, ಕೊಡೆ ಮುಂತಾದ ವಿಶಿಷ್ಟ ರೀತಿಗಳಲ್ಲಿ ನಡೆದಿತ್ತು. ಈ ವರ್ಷ “ಸೆಲ್ಸಿ ಪಾಯಿಂಟ್” ಮೂಲಕ ಹೊಸ ಕಲ್ಪನೆಗೆ ಚಾಲನೆ ನೀಡಲಾಗಿದೆ.
ಪ್ರಚಾರ ಪರಿಕಲ್ಪನೆಯ ರೂವಾರಿ ಸುಹಾಸ್ ಹೆಗ್ಡೆ ಶುಕ್ರವಾರ ಈ ಹೊಸ ತಂತ್ರವನ್ನು ನಂದಳಿಕೆಯಲ್ಲಿ ಬಿಡುಗಡೆ ಮಾಡಿದರು. ಈ ಆಧುನಿಕ ಸೆಲ್ಫಿ ಕಾನ್ಸೆಪ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಿರಿ ಜಾತ್ರೆಯ ಚರ್ಚೆಗೆ ಹೊಸ ರಸಕೊಟ್ಟಿದೆ.