
ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷ 2025–26ರ ಚಟುವಟಿಕೆಗಳು ಇಂದಿನಿಂದ ರಾಜ್ಯದಾದ್ಯಾಂತ ಆರಂಭವಾಗಲಿದ್ದು, ಮಕ್ಕಳಿಗೆ ಉತ್ತಮ ಸ್ವಾಗತ ನೀಡಲು ಶಾಲೆಗಳು ಸಜ್ಜಾಗಿವೆ. ಹೊಸ ವರ್ಷದ ಮೊದಲ ದಿನದಿಂದಲೇ ತರಗತಿಗಳು ನಡೆಯಲಿದ್ದು, ಬಿಸಿಯೂಟದ ಜೊತೆಗೆ ವಿಶೇಷ ಸಿಹಿಯೂ ಮಕ್ಕಳಿಗೆ ನೀಡಲಾಗುತ್ತದೆ.
ಈ ದಿನ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ವಿತರಣೆ ನಡೆಯಲಿದ್ದು, ಶಾಲಾ ಆರಂಭದ ದಿನವೇ ಖುಷಿಯ ವಾತಾವರಣವಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಬೆಂಗಳೂರಿನ ಆಡುಗೋಡಿಯ ಅಯ್ಯಪ್ಪ ಗಾರ್ಡನ್ನ ಪಟೇಲ್ ಮುನಿಚಿನ್ನಪ್ಪ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ‘ಶಾಲಾ ಪ್ರಾರಂಭೋತ್ಸವ’ವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಮಧ್ಯಾಹ್ನ 11ಕ್ಕೆ ಆರಂಭವಾಗಲಿದೆ.
ರಾಜ್ಯಾದ್ಯಂತ ಒಂದರಿಂದ ಹತ್ತನೇ ತರಗತಿವರೆಗೆ 46 ಸಾವಿರ ಸರ್ಕಾರಿ ಶಾಲೆಗಳು ನೂತನ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದು, ಈ ಸಂಬಂಧಿತ ವೇಳಾಪಟ್ಟಿಯು ಈಗಾಗಲೇ ಪ್ರಕಟವಾಗಿದೆ. ಇತ್ತ ಕೆಲವು ಖಾಸಗಿ ಶಾಲೆಗಳು ಆರಂಭವಾಗಿದ್ದು, ಉಳಿದ ಶಾಲೆಗಳೂ ಗುರುವಾರದಿಂದ ಶೈಕ್ಷಣಿಕ ವರ್ಷ ಆರಂಭಿಸುತ್ತವೆ.

ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಬಿಡುಗಡೆ ಮಾಡಿದ್ದು, ಹೊಸ ವರ್ಷಕ್ಕೆ ಮುನ್ನ ಶಾಲೆಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುರಕ್ಷತಾ ಕ್ರಮಗಳ ಪಾಲನೆ, ಶಿಥಿಲ ಕಟ್ಟಡಗಳ ಪರಿಶೀಲನೆ ಮುಂತಾದ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.