
ಗೋಕರ್ಣ : ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದಲ್ಲಿ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ವೀರಮರಣ ಹೊಂದಿದ ರಷ್ಯಾ ಯೋಧ ಸೆರ್ಗೆಯ್ ಗ್ರಾಬ್ಲೆವ್ ಅವರ ಶ್ರಾದ್ಧ ವಿಧಿ ಶಾಸ್ತ್ರೋಕ್ತವಾಗಿ ನೆರವೇರಿತು. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಪುರೋಹಿತ ವೇ. ಪ್ರಶಾಂತ ಹಿರೇಗಂಗೆ ಅವರ ನೇತೃತ್ವದಲ್ಲಿ ನಾರಾಯಣ ಬಲಿ, ಪಿಂಡ ಪ್ರದಾನ, ತರ್ಪಣ ಸೇರಿದಂತೆ ವೈದಿಕ ವಿಧಿ ವಿಧಾನಗಳು ನೆರವೇರಿದವು.
ಸೆರ್ಗೆಯ್ ಅವರ ಸಂಬಂಧಿಕರಾದ ಎಲಿನಾ ಅವರು ಈ ಕಾರ್ಯವನ್ನು ಆಯೋಜಿಸಿದ್ದರು. ರಷ್ಯಾದಲ್ಲಿರುವ ಮೃತ ಯೋಧನ ಕುಟುಂಬದವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಧಿಗಳಿಗೆ ಭಾಗಿಯಾದರು. ಪ್ರಾರ್ಥನೆಯ ಮೂಲಕ ಅವರು ಸೆರ್ಗೆಯ್ ಅವರ ಆತ್ಮಕ್ಕೆ ಮೋಕ್ಷ ಸಿಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕೃತಿ ಮತ್ತು ಗೋಕರ್ಣದೊಂದಿಗೆ ನಂಟು:
ಸೆರ್ಗೆಯ್ ಗ್ರಾಬ್ಲೆವ್ 18 ವರ್ಷಗಳ ಹಿಂದೆ ಭಾರತ ಪ್ರವೇಶಿಸಿ ಗೋಕರ್ಣದಲ್ಲಿ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದರು. ವಾರಣಾಸಿಯಲ್ಲಿ ಸಂಸ್ಕೃತ ಅಧ್ಯಯನ ಮಾಡಿದ್ದ ಅವರು ವೇದಮಂತ್ರಗಳ ಅಭ್ಯಾಸ ಮಾಡುತ್ತ, ಹಿಂದೂ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದರು. ಗೋಕರ್ಣದಲ್ಲಿ ಹಲವರೊಂದಿಗೆ ಆತ್ಮೀಯ ಸಂಪರ್ಕ ಬೆಳೆಸಿದ ಅವರು ಇಲ್ಲಿ “ಸೆರ್ಗೆಯ್ ಬಾಬಾ” ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು.
ವೀರಮರಣದ ಕಥೆ:
ಸೆರ್ಗೆಯ್ ಗ್ರಾಬ್ಲೆವ್ ಅವರು 18 ವರ್ಷಗಳ ಹಿಂದೆ ರಷ್ಯಾ ಸೇನೆಯನ್ನು ತೊರೆದಿದ್ದು , 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗ ತಾಯ್ನಾಡಿನ ಕರೆಯೊಂದಿಗೆ ಪುನಃ ಸೇನೆಗೆ ಸೇರಿದ್ದರು. ಅವರು ಏಪ್ರಿಲ್ 28, 2025ರಂದು ಯುದ್ಧದಲ್ಲಿ ವೀರಮರಣ ಹೊಂದಿದರು.
ಗೋಕರ್ಣದಲ್ಲಿ ಶ್ರಾದ್ಧ ಆಯೋಜನೆಯ ಕಾರಣ:
ಅವರ ಜೀವನದ ಕೊನೆಯ ದಿನಗಳವರೆಗೆ ಗೋಕರ್ಣವನ್ನು ಆತ್ಮೀಯವಾಗಿ ಮೆಚ್ಚಿದ ಸೆರ್ಗೆಯ್ ಕುಟುಂಬವು ಭಾರತದಲ್ಲಿ ನಡೆಯುವ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಗೌರವಿಸುವ ದೃಷ್ಟಿಯಿಂದ ಗೋಕರ್ಣದಲ್ಲಿಯೇ ಅವರ ಶ್ರಾದ್ಧ ಕಾರ್ಯವನ್ನು ಆಯೋಜಿಸಿತ್ತು. ಪವಿತ್ರ ಗೋಕರ್ಣ ಕ್ಷೇತ್ರದಲ್ಲಿ ನಡೆದ ಈ ಅಪರೂಪದ ಅಂತ್ಯಕ್ರಿಯೆ ಹಲವರ ಗಮನ ಸೆಳೆದಿದ್ದು, ಸೆರ್ಗೆಯ್ ರವರ ಆತ್ಮೀಯರು ಶ್ರದ್ಧಾಪೂರ್ವಕವಾಗಿ ಭಾಗಿಯಾಗಿದ್ದರು.