
ಮಂಗಳೂರು: ಆರ್ಎಸ್ಎಸ್ ಮುಖಂಡ ಯು.ಜಿ. ರಾಧಾ ಅವರ ಮನೆಗೆ ಪೊಲೀಸ್ ದಾಳಿ ಪ್ರಕರಣ ಇದೀಗ ನ್ಯಾಯಾಂಗ ದಿಕ್ಕಿನಲ್ಲಿ ತೀವ್ರತೆ ಪಡೆದುಕೊಂಡಿದೆ. ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲದಿದ್ದರೂ, ರಾತ್ರಿವೇಳೆ ಮನೆಗೆ ಬಂದ ಪೊಲೀಸರು ಅವರ ಫೋಟೋ ತೆಗೆದು, ಜಿಪಿಎಸ್ ಅಪ್ಲೋಡ್ ಮಾಡಿದ್ದರೆಂದು ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಅರುಣ್ ಕುಮಾರ್ಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಜೂನ್ 1ರಂದು ಉಪ್ಪಿನಂಗಡಿಯಲ್ಲಿರುವ ಯು.ಜಿ. ರಾಧಾ ಅವರ ಮನೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಹೈಕೋರ್ಟ್ ನ್ಯಾ. ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ಪ್ರಕರಣವನ್ನು ವಿಚಾರಣೆ ನಡೆಸಿದ್ದು, ಕಾರಣ ಕೇಳಿ ಎಸ್ಪಿಗೆ ನೋಟಿಸ್ ನೀಡಿದೆ.
ರಾಧಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, “ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗಿದೆ. ನನ್ನ ವ್ಯಕ್ತಿತ್ವ, ಖಾಸಗಿತನ ಹಕ್ಕಿಗೆ ಧಕ್ಕೆಯಾಗಿದೆ” ಎಂದು ದೂರಿದ್ದಾರೆ. ಅವರು 20 ಲಕ್ಷ ರೂಪಾಯಿ ಮಾನನಷ್ಟಕ್ಕೆ ಬೇಡಿಕೆ ಇಟ್ಟಿದ್ದಾರೆ. ಇವರ ಪರವಾಗಿ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ಜಿಲ್ಲಾ ಎಸ್ಪಿಗೆ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ.