
ಚಿಕ್ಕಬಳ್ಳಾಪುರ : ವಿಧಾನಸೌಧದ ಮೆಟ್ಟಿಲುಗಳ ಮೇಲೆ ಜೂನ್ 4ರಂದು ನಡೆದ ಆರ್ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆಹ್ವಾನದ ವಿಚಾರದಲ್ಲಿ ಪ್ರಮುಖ ವಾಕ್ಸಮರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಸ್ಪಷ್ಟನೆ ನೀಡಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲಟ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ನಾನೇ ಎಂದು ಘೋಷಿಸಿದ್ದಾರೆ.
ಗೌರಿಬಿದನೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಆರ್ಸಿಬಿ ಆಟಗಾರರ ಸನ್ಮಾನ ಕಾರ್ಯಕ್ರಮಕ್ಕೆ ರಾಜ್ಯಪಾಲರು ತಾವಾಗಿಯೇ ಬಂದಿರಲಿಲ್ಲ. ಅವರನ್ನು ನಾನು ಆಹ್ವಾನಿಸಿದ್ದೆ” ಎಂದು ಹೇಳಿದರು. ಈ ಮಾತು ಅವರು ಹಿಂದಿನ ಹೇಳಿಕೆಗೆ ಸಂಪೂರ್ಣ ವಿರುದ್ಧವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ, “ರಾಜ್ಯಪಾಲರಿಗೆ ಆಹ್ವಾನ ನೀಡಿದ್ದು ಯಾರೆಂದು ಗೊತ್ತಿಲ್ಲ” ಎಂದು ಹೇಳಿದ್ದ ಸಿಎಂ ಇದೀಗ ಯೂಟರ್ನ್ ತೆಗೆದುಕೊಂಡಿದ್ದಾರೆ.
ಸಿಎಂ ಹೇಳಿಕೆಯಲ್ಲಿ, “ಕೆಎಸ್ಸಿಎಯ ಶಂಕರ್ ಹಾಗೂ ಜಯರಾಮ್ ಅವರು ಜೂನ್ 4ರಂದು ಬೆಳಗ್ಗೆ 11.29ಕ್ಕೆ ನನ್ನನ್ನು ಆಹ್ವಾನಿಸಿದರು. ಬಳಿಕ ನನ್ನ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ರಾಜ್ಯಪಾಲರಿಗೆ ಕರೆ ಮಾಡಿ ನನ್ನೊಂದಿಗೆ ಮಾತುಕತೆ ನಡೆಸಲು ವ್ಯವಸ್ಥೆ ಮಾಡಿದರು. ರಾಜ್ಯಪಾಲರಿಗೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆಂದು ತಿಳಿಸಿ ಅವರಿಗೂ ಆಹ್ವಾನ ನೀಡಿದೆ” ಎಂದರು.
ಈ ಮೂಲಕ ರಾಜ್ಯಪಾಲರ ಆಗಮನದ ಹಿಂದೆ ಸರಕಾರದ ಅಧಿಕೃತ ಆಹ್ವಾನವಿದೆಯೆಂಬ ರಾಜಭವನದ ಹೇಳಿಕೆಗೆ ಸರಿಹೊಂದುವಂತೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ಈ ಮೊದಲು ನೀಡಿದ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆಂದು ಅವರು ದೂರಿದರು.