
ಹಿರಿಯಡ್ಕ : ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯಡ್ಕದ ರೋವರ್ ರೆಂಜರ್ ಘಟಕದ ವತಿಯಿಂದ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ಕನ್ನಡ ಉಪನ್ಯಾಸಕಿ ನಳಿನಾ ದೇವಿ ಎಂ ಆರ್ ರವರು “ರಕ್ಷಾ ಬಂಧನ ಕೇವಲ ನೂಲಿನ ದಾರ ಅಷ್ಟೇ ಅಲ್ಲ, ಅದರಲ್ಲಿ ಭಾವನೆ ಅಡಗಿರುತ್ತದೆ . ರಕ್ಷಾ ಬಂಧನದ ಮಹತ್ವ ಏನು ಎಂಬುದನ್ನು ಕ್ರಷ್ಣ ದ್ರೌಪದಿಗೆ ರಕ್ಷೆ ಕಟ್ಟುವುದರ ಮೂಲಕ ಜಗತ್ತಿಗೆ ತೋರಿಸಿದ್ದಾನೆ . ಐತಿಹಾಸಿಕವಾಗಿ ಹಾಗೂ ಪೌರಾಣಿಕವಾಗಿ ಸಹ ಈ ಹಬ್ಬ ಬಹಳ ಮಹತ್ವವನ್ನು ಪಡೆದಿದೆ” ಎಂದು ತಿಳಿಸಿದರು .

ರೋವರ್ ರೇಂಜರ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಮಂಜುನಾಥ್ ಭಟ್ ವಹಿಸಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕರಾದ ದೇವದಾಸ್ ಡಿ ಪ್ರಭು ಮತ್ತು ರೇಂಜರ್ ಘಟಕದ ಸಂಚಾಲಕಿ ಗೀತಾ ಕುಮಾರಿ ಪ್ರಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಉಪನ್ಯಾಸಕರಾದ ಡಾಕ್ಟರ್ ಉದಯ್ ಕುಮಾರ್ , ರೋವರ್ ಘಟಕದ ಸಂಚಾಲಕರಾದ ಮಹೇಶ್ ಕೊಟ್ಟಾರಿ , ಹಳೆ ವಿದ್ಯಾರ್ಥಿ ಶ್ರೀ ಪ್ರದ , ವಿದ್ಯಾರ್ಥಿ ನಾಯಕ ಆಯುಷ್, ನಾಯಕಿ ತ್ರಿಶಾ , ರೇಂಜರ್ ನಾಯಕಿ ಪ್ರತೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಸನ್ನಿಧಿ ಸ್ವಾಗತಿಸಿ , ಕುಮಾರಿ ವರ್ಷಿಣಿ ಧನ್ಯವಾದ ಸಲ್ಲಿಸಿದರು , ಕುಮಾರಿ ಅದಿತಿ ಕಾರ್ಯಕ್ರಮ ನಿರೂಪಿಸಿದರು.





































