
ದೆಹಲಿ: ಭಾರತದ ತಾಳ್ಮೆಯನ್ನು ಪಾಕಿಸ್ತಾನ ಮತ್ತೆ ಪರೀಕ್ಷಿಸುವ ಪ್ರಯತ್ನ ಮಾಡಿದರೆ, ಇದು ದೇಶದಿಂದ ‘ಗುಣಮಟ್ಟದ ಪ್ರತಿಕ್ರಿಯೆ’ಗೆ ದಾರಿ ಮಾಡಿಕೊಡುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ನವದೆಹಲಿಯಲ್ಲಿ ನಡೆದ ನ್ಯಾಷನಲ್ ಕ್ವಾಲಿಟಿ ಕಾನ್ಕ್ಲೇವ್ನಲ್ಲಿ ಮಾತನಾಡುತ್ತಾ “ನಮ್ಮ ರಾಷ್ಟ್ರವನ್ನು ರಕ್ಷಿಸುವಲ್ಲಿ ಯಾವುದೇ ಮಿತಿ ಅಥವಾ ಅಡಚಣೆಗಳು ನಮ್ಮನ್ನು ತಡೆಯಲಾಗದು. ಭಾರತದ ರಕ್ಷಣಾ ಕೈಗಾರಿಕಾ ವಲಯ ಈಗ ಬಲಿಷ್ಠವಾಗಿದ್ದು, ನಾವು ಪ್ರತಿಕ್ರಿಯೆಗೆ ಸಂಪೂರ್ಣ ಸಿದ್ಧರಾಗಿದ್ದೇವೆ. ಯಾವುದೇ ಹೊಡೆತ ಬಂದಾಗ ನಾವು ತಕ್ಕ ರೀತಿಯಲ್ಲಿ ಉತ್ತರ ನೀಡುತ್ತೇವೆ,” ಎಂದು ಅವರು ಹೇಳಿದರು.
‘ಬ್ರ್ಯಾಂಡ್ ಇಂಡಿಯಾ’ ಗುರಿ
ರಕ್ಷಣಾ ಉತ್ಪನ್ನಗಳ ಗುಣಮಟ್ಟದ ಮೇಲೆ ವಿಶ್ವದ ನಂಬಿಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು. “ಭಾರತೀಯ ರಕ್ಷಣಾ ಉದ್ಯಮವನ್ನು ವಿಶ್ವದಾದ್ಯಂತ ವಿಶ್ವಾಸಾರ್ಹ ‘ಬ್ರ್ಯಾಂಡ್’ ಆಗಿ ರೂಪಿಸಬೇಕು. ಭವಿಷ್ಯದಲ್ಲಿ ಯಾವುದೇ ದೇಶ ರಕ್ಷಣಾ ಸಲಕರಣೆಗಳನ್ನು ಬೇಕಾದಾಗ, ಅವರು ಬ್ರ್ಯಾಂಡ್ ಇಂಡಿಯಾವನ್ನೇ ಆರಿಸಬೇಕು,” ಎಂದೂ ರಾಜನಾಥ್ ಸಿಂಗ್ ಹೇಳಿದರು.
ಆಪರೇಷನ್ ಸಿಂದೂರ ಯಶಸ್ಸು
ರಕ್ಷಣಾ ಸಚಿವರು, ಭದ್ರತಾ ಪಡೆಗಳು ಇತ್ತೀಚೆಗೆ ನಡೆಸಿದ ‘ಆಪರೇಷನ್ ಸಿಂದೂರ’ ಬಗ್ಗೆ ಮಾತನಾಡುತ್ತಾ, “ಈ ಕಾರ್ಯಾಚರಣೆ ಅತ್ಯಂತ ನಿಖರವಾಗಿ, ಅಮಾಯಕರಿಗೆ ಯಾವುದೇ ಹಾನಿಯಾಗದಂತೆ ನಡೆದಿದ್ದು, 9 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಗಿದೆ. ಅನೇಕ ಭಯೋತ್ಪಾದಕರು ಹತ್ಯೆಗೆ ಗುರಿಯಾಗಿದ್ದಾರೆ. ಈ ಕಾರ್ಯಾಚರಣೆ ಭಾರತೀಯ ಸೇನೆಯ ಧೈರ್ಯ ಮತ್ತು ತಂತ್ರಜ್ಞಾನದ ಸ್ಪಷ್ಟ ಚಿತ್ರಣವಾಗಿದೆ,” ಎಂದು ಶ್ಲಾಘಿಸಿದರು.
ಪಾಕ್ ಹಾಗೂ ಪಿಒಕೆಗೆ ಸಂದ ಭಾರೀ ಸಂದೇಶ
“ಪಾಕಿಸ್ತಾನ ಹಾಗೂ ಪಿಒಕೆ ಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟಲು ಭಾರತ ಬದ್ಧವಾಗಿದೆ. ಭಾರತದ ಭದ್ರತೆಗೆ ಕುತ್ತು ತಂದರೆ, ಅದರ ಪ್ರತೀ ಪರಿಣಾಮವನ್ನು ಎದುರಿಸಲು ಅವರು ಸಿದ್ಧರಾಗಿರಬೇಕು,” ಎಂದು ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಬಿಗುವಾದ ಎಚ್ಚರಿಕೆ ನೀಡಿದರು