
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಭೆ
ಏಕಾಗ್ರತೆ, ಮಾನಸಿಕ ದೃಢತೆ ಹಾಗೂ ಆತ್ಮವಿಶ್ವಾಸದ ವೃದ್ಧಿಯ ಜೊತೆಗೆ ಭಗವಂತನ ಸಾಕ್ಷಾತ್ಕಾರವನ್ನು ಕಂಡುಕೊಳ್ಳಲು ಇರುವ ಸುಲಭ ದಾರಿ ಭಜನೆ. ಇಂದು ಭಜನೆಯತ್ತ ಯುವ ಸಮುದಾಯದ ಸಹಿತ ಎಲ್ಲಾ ವರ್ಗದ ಜನತೆ ಆಕರ್ಷಿತರಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ವಲಯಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಭಜನಾ ಮಂಡಳಿಗಳನ್ನು ಸಂಘಟಿಸುವ ಮೂಲಕ ಭಜನಾ ಪರಿಷತ್ತನ್ನು ಇನ್ನಷ್ಟು ಸದೃಢವಾಗಿ ಬೆಳೆಸಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು ಹೇಳಿದರು.
ಅವರು ಶ್ರೀ ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಗತಿ ಸೌಧದಲ್ಲಿ ಭಜನಾ ಪರಿಷತ್ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಸಮಿತಿ ಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ದಾಸವರೇಣ್ಯರು ರಚಿಸಿರುವ ಅರ್ಥಗರ್ಭಿತ ಭಜನೆಗಳನ್ನು ಅರ್ಥೈಸಿಕೊಂಡು ಹಾಡಿದಾಗ ಅದರಲ್ಲಿ ಅಡಕವಾಗಿರುವ ಜೀವನ ಮೌಲ್ಯಗಳ ಸಾರವನ್ನು ಅರಿಯಲು ಸಾಧ್ಯ ಎಂದ ಅವರು ಉಡುಪಿ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಭಜನಾ ಪರಿಷತ್ ಸಹಯೋಗದಲ್ಲಿ ರಾಜಾಂಗಣದಲ್ಲಿ 2 ಬಾರಿ ನಡೆದ ಯಶಸ್ವೀ ಸಹಸ್ರ ಕಂಠ ಗಾಯನದ ತರಬೇತಿಯೊಂದಿಗೆ ನೇತೃತ್ವವನ್ನು ವಹಿಸಿರುವ ವಿದುಷಿ ಉಷಾ ಹೆಬ್ಬಾರ್ ಮಣಿಪಾಲ ಅವರು ಭಜನಾ ಪರಿಷತ್ತಿನ ಕೇಂದ್ರ ಸಮಿತಿಯಿಂದ ಭಜನಾ ತರಬೇತುದಾರರಾಗಿ ನಿಯುಕ್ತಿಗೊಂಡಿರುವ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದರು.
ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್ ಮಾತನಾಡಿ, ಮುಂದೆ ನಡೆಯಲಿರುವ ವಿಶೇಷ ಕಾರ್ಯಕ್ರಮದ ಪ್ರಯುಕ್ತ ವಲಯಗಳ ಮಟ್ಟದಲ್ಲಿ ಭಜನಾ ತರಬೇತಿ ನಡೆಯಲಿದ್ದು ಭಜಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮಾತನಾಡಿ ತಾಲೂಕು ಭಜನಾ ಪರಿಷತ್ ಸಹಯೋಗದೊಂದಿಗೆ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ನಡೆದ ವಿಜಯದಾಸರ ಆರಾಧನೆ, ಪುರಂದರದಾಸರ ಆರಾಧನೆ ಪ್ರಯುಕ್ತ ನಡೆದ ಸಹಸ್ರ ಕಂಠ ಗಾಯನ, ಸಪ್ತೋತ್ಸವದ ಅಂಗವಾಗಿ ರಥಬೀದಿಯಲ್ಲಿ ನಡೆದ ವಿಶೇಷ ಕುಣಿತದ ಭಜನೋತ್ಸವ ಸಹಿತ ಇನ್ನಿತರ ವಿಶೇಷ ಕಾರ್ಯಕ್ರಮಗಳ ವಿವರಗಳನ್ನು ನೀಡಿ ಮುಂದೆ ನಡೆಯಲಿರುವ ವಲಯ ಮಟ್ಟದ ಸಭೆ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಶ್ರೀ ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್. ಹಾಗೂ ಭಜನಾ ಪರಿಷತ್ ವಲಯಗಳ ಸಂಯೋಜಕರು ಉಪಸ್ಥಿತರಿದ್ದರು.
ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಮುದ್ರಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಜನಾ ಪರಿಷತ್ ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು.