
ಬೆಂಗಳೂರು: ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರಂತಹ ಕಲಾವಿದರು ವಿಭಿನ್ನ ಶೈಲಿಯ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ. ಈ ತಂಡವನ್ನು ಕೆಲವರು ‘ಶೆಟ್ಟಿ ಮಾಫಿಯಾ’ ಅಥವಾ ‘ಶೆಟ್ಟಿ ಗ್ಯಾಂಗ್’ ಎಂದು ಕರೆಯುತ್ತಿದ್ದು, ಈ ಬಗ್ಗೆ ನಟ ಮತ್ತು ನಿರ್ದೇಶಕ ರಾಜ್ ಬಿ. ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ಮೊಟ್ಟೆಯ ಕಥೆ, ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಕಾಂತಾರ, ಸು ಫ್ರಮ್ ಸೋ ಮುಂತಾದ ಯಶಸ್ವಿ ಚಿತ್ರಗಳ ಮೂಲಕ ಈ ಕಲಾವಿದರು ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿದ್ದಾರೆ. ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ಅನುಪಮಾ ಚೋಪ್ರಾ ಅವರೊಂದಿಗೆ ನೀಡಿದ ಸಂದರ್ಶನದಲ್ಲಿ ರಾಜ್ ಬಿ. ಶೆಟ್ಟಿ ಅವರು ‘ಶೆಟ್ಟಿ ಗ್ಯಾಂಗ್’ ಎಂಬ ಕರೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
“ಕರ್ನಾಟಕದಲ್ಲಿ ಶೆಟ್ಟಿ ಮಾಫಿಯಾ, ಶೆಟ್ಟಿ ಗ್ಯಾಂಗ್ ಎನ್ನುತ್ತಾರೆ. ನೀವು ಕೂಡ ಗ್ಯಾಂಗ್ ಮಾಡಿ ಬ್ರದರ್. ನಿಮಗೆ ಒಂಟಿಯಾಗಿ ಓಡಾಡಿ ಎಂದು ಹೇಳಿದವರು ಯಾರು? ನೀವು ಕೂಡ ಗ್ಯಾಂಗ್ ಮಾಡಿ. ನಿಮಗೆ ಎಲ್ಲಾ ಗ್ಲೋರಿ, ಜನಪ್ರಿಯತೆ ಬೇಕು. ನೀವು ಬೇರೆಯವರ ಜೊತೆ ಕೊಲ್ಯಾಬರೇಟ್ ಆಗುತ್ತಿಲ್ಲ ಎಂಬುದು ನಮ್ಮ ಸಮಸ್ಯೆ ಅಲ್ಲ. ನಿಮ್ಮದೇ ಗ್ಯಾಂಗ್ ಕಟ್ಟಿಕೊಳ್ಳಿ” ಎಂದು ರಾಜ್ ಬಿ. ಶೆಟ್ಟಿ ಖಡಕ್ ಆಗಿ ಸಲಹೆ ನೀಡಿದ್ದಾರೆ.
ಈ ತಂಡದ ಸದಸ್ಯರು ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ಉದಾಹರಣೆಗೆ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ಕಾಂತಾರ ಚಿತ್ರವನ್ನು ನೋಡಿ ರಕ್ಷಿತ್ ಶೆಟ್ಟಿ ಸಂತೋಷದಿಂದ ಅವರನ್ನು ತಬ್ಬಿಕೊಂಡಿದ್ದರು. ಇದು ಈ ಗುಂಪಿನ ಸಹಕಾರ ಮತ್ತು ಸ್ನೇಹವನ್ನು ತೋರಿಸುತ್ತದೆ. ರಾಜ್ ಬಿ. ಶೆಟ್ಟಿ ಅವರ ಈ ಪ್ರತಿಕ್ರಿಯೆ, ಈ ಹಣೆಪಟ್ಟಿಗಳ ಬಗ್ಗೆ ಅವರ ನಿಲುವನ್ನು ಸ್ಪಷ್ಟಪಡಿಸಿದೆ.



































