
ಉಡುಪಿ: ಉಡುಪಿಯ ಐತಿಹಾಸಿಕ ಶ್ರೀ ಕೃಷ್ಣ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ದೀಪಾವಳಿ ಹಬ್ಬದ ಅಂಗವಾಗಿ ಮಠದಲ್ಲಿ ಜಲಪೂರಣ ಮತ್ತು ಎಣ್ಣೆಶಾಸ್ತ್ರದ ವಿಧಿಗಳನ್ನು ನೆರವೇರಿಸಲಾಯಿತು.
ಜಲಪೂರಣ ಶಾಸ್ತ್ರದ ಅಂಗವಾಗಿ ಮಠದ ಪುರೋಹಿತರು ಕಲಶಪೂಜೆ ಮಾಡಿದರು. ಈ ಸಂದರ್ಭದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದರು ಉಪಸ್ಥಿತರಿದ್ದರು.

ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಉಭಯ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ನೆರವೇರಿಸಿದರು. ಈ ಧಾರ್ಮಿಕ ವಿಧಿಯಲ್ಲಿ ನೆರೆದಿದ್ದ ಭಕ್ತರೂ ಪಾಲ್ಗೊಂಡು ಎಣ್ಣೆಶಾಸ್ತ್ರವನ್ನು ಮಾಡಿಸಿಕೊಂಡರು.
ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀ ಪಾದರು ಈ ಸಂದರ್ಭದಲ್ಲಿ ಶುಭಾಶೀರ್ವಾದ ಮಾಡಿದರು. “ಜಗತ್ತಿನ ಎಲ್ಲ ಭಕ್ತರಿಗೂ ಒಳ್ಳೆಯದಾಗಬೇಕು, ಶಾಂತಿ ಸಿಗಬೇಕು. ಭಗವಂತನ ಅನುಗ್ರಹವಿದ್ದರೆ ಜನರಿಗೆ ಶಾಂತಿ ಸಿಗುತ್ತದೆ,” ಎಂದು ಹಾರೈಸಿದರು. ದೀಪಾವಳಿ ಹಬ್ಬದ ಮಹತ್ವವನ್ನು ನಾಡಿನ ಸಮಸ್ತ ಜನತೆಗೆ ತಿಳಿಸಿ ಶುಭಹಾರೈಸಿದರು.



































