
ನವದೆಹಲಿ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಭೀಕರ ಪೋರ್ಶೆ ಐಷಾರಾಮಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಕ್ಷ್ಯ ನಾಶಪಡಿಸಲು ರಕ್ತದ ಮಾದರಿಗಳನ್ನು ಬದಲಾಯಿಸಿದ ಆರೋಪ ಎದುರಿಸುತ್ತಿದ್ದ 3 ಪ್ರಮುಖ ವ್ಯಕ್ತಿಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ಹೊರಡಿಸಿದ್ದು, ಪೋಷಕರ ಬೇಜವಾಬ್ದಾರಿತನದ ವಿರುದ್ಧ ಅತ್ಯಂತ ಕಟುವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ ಮತ್ತು ತೀರ್ಪು: ಮೇ 19, 2024 ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಕುಡಿದ ಅಮಲಿನಲ್ಲಿ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಪೋರ್ಶೆ ಕಾರು ಇಬ್ಬರು ಐಟಿ ಉದ್ಯೋಗಿಗಳ ಪ್ರಾಣವನ್ನು ಬಲಿ ಪಡೆದಿತ್ತು. ಈ ಘಟನೆಯ ನಂತರ, ಅಪ್ರಾಪ್ತನ ರಕ್ತದಲ್ಲಿ ಮದ್ಯದ ಅಂಶವಿಲ್ಲ ಎಂದು ಸಾಬೀತುಪಡಿಸಲು ರಕ್ತದ ಮಾದರಿಗಳನ್ನು ಅದಲು-ಬದಲು ಮಾಡಿದ ಸಂಚಿನಲ್ಲಿ ಈ ಮೂವರು ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.
ಜಾಮೀನು ಪಡೆದ ಆರೋಪಿಗಳಾದ ಅಮರ್ ಸಂತೀಶ್ ಗಾಯಕ್ವಾಡ್, ಆದಿತ್ಯ ಅವಿನಾಶ್ ಸೂದ್ ಮತ್ತು ಆಶಿಶ್ ಸತೀಶ್ ಮಿತ್ತಲ್ ಈಗಾಗಲೇ ಸುಮಾರು 18 ತಿಂಗಳುಗಳ ಕಾಲ ಜೈಲು ಶಿಕ್ಷೆ ಅನುಭವಿಸಿರುವುದನ್ನು ಪರಿಗಣಿಸಿದ ನ್ಯಾಯಾಲಯವು, ವಿಚಾರಣಾ ನ್ಯಾಯಾಲಯ ವಿಧಿಸುವ ಕಟ್ಟುನಿಟ್ಟಿನ ಷರತ್ತುಗಳ ಅಡಿಯಲ್ಲಿ ಬಿಡುಗಡೆ ಮಾಡಲು ಸೂಚಿಸಿದೆ.
ಪೋಷಕರ ವಿರುದ್ಧ ನ್ಯಾಯಾಲಯದ ಚಾಟಿ: ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಇಂದಿನ ಶ್ರೀಮಂತ ಪೋಷಕರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಇಂದಿನ ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಕಾಲ ಕಳೆಯಲು ಸಮಯವಿಲ್ಲ. ಅದಕ್ಕೆ ಬದಲಾಗಿ ಅವರು ಎಟಿಎಂ ಕಾರ್ಡ್ಗಳನ್ನು ಮತ್ತು ಹಣವನ್ನು ನೀಡಿ ಕೈತೊಳೆದುಕೊಳ್ಳುತ್ತಾರೆ. ಮಕ್ಕಳಿಗೆ ದುಬಾರಿ ಕಾರುಗಳ ಕೀ ನೀಡಿ, ಮೋಜು ಮಸ್ತಿ ಮಾಡಲು ಹಣದ ಹೊಳೆ ಹರಿಸುವುದು ಎಷ್ಟು ಸರಿ?” ಎಂದು ಪೀಠವು ಪ್ರಶ್ನಿಸಿದೆ. ಇಂತಹ ಸಂಸ್ಕೃತಿಯಿಂದಾಗಿ ಅಮಾಯಕರ ಜೀವಗಳು ರಸ್ತೆಯಲ್ಲಿ ಬಲಿಯಾಗುತ್ತಿವೆ ಎಂದು ಕೋರ್ಟ್ ಎಚ್ಚರಿಸಿದೆ.
ಈ ಹಿಂದೆ ಬಾಲಾಪರಾಧ ನ್ಯಾಯ ಮಂಡಳಿಯು ಬಾಲಕನಿಗೆ ಕೇವಲ 300 ಪದಗಳ ಪ್ರಬಂಧ ಬರೆಯುವಂತೆ ಸೂಚಿಸಿ ಜಾಮೀನು ನೀಡಿದ್ದು ರಾಷ್ಟ್ರಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ನಡೆದ ಸುದೀರ್ಘ ತನಿಖೆಯಲ್ಲಿ ವೈದ್ಯಕೀಯ ವರದಿಗಳ ತಿದ್ದುಪಡಿ ಮತ್ತು ಲಂಚದ ವ್ಯವಹಾರಗಳು ಬೆಳಕಿಗೆ ಬಂದಿದ್ದವು.



































