
ಮೈಸೂರು: ಕನ್ನಡ ಸಾಹಿತ್ಯ ಲೋಕದ ಪ್ರಮುಖ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ನಾಡಿನಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಆದರೆ, ಹಿರಿಯ ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಅವರು, ತಮ್ಮ ಎದುರು ಮನೆಯ ಸ್ನೇಹಿತನಾಗಿದ್ದ ಭೈರಪ್ಪ ಅವರ ನಿಧನಕ್ಕೆ, “ಅವರು ಹೋಗಿದ್ದಕ್ಕೆ ನನಗೆ ದುಃಖ ಆಗಲಿಲ್ಲ” ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಾರೆ.
ಈ ಕುರಿತು ಮಾತನಾಡಿದ ಭಗವಾನ್, “ಭೈರಪ್ಪನವರು ನೂರು ವರ್ಷ ಬದುಕಬೇಕಿತ್ತು. ಅದು ಆಗಲಿಲ್ಲ. ಆದರೆ, ಬದುಕಿದಷ್ಟು ದಿನದಲ್ಲಿ ಅವರು ಎಲ್ಲಾ ಸಾಧನೆ ಮಾಡಿದ್ದಾರೆ. ಹೀಗಾಗಿ ಅವರ ಅಗಲಿಕೆ ನನಗೆ ದುಃಖ ತರಿಸಲಿಲ್ಲ. ಅವರು ನಮಗೆ ಮಾದರಿಯಾಗಿದ್ದಾರೆ. ಸಾವು ನಿಶ್ಚಿತ, ಅದರಿಂದ ಏನೂ ಮಾಡಕ್ಕಾಗಲ್ಲ” ಎಂದು ಹೇಳುವ ಮೂಲಕ ತಮ್ಮ ಸ್ನೇಹಿತನ ಮೇಲಿನ ಗೌರವವನ್ನು ವ್ಯಕ್ತಪಡಿಸಿದರು.



































