
ಮುಂಬೈ : ಕನ್ನಡ ಮತ್ತು ತುಳು ನಾಟಕ ರಂಗದಲ್ಲಿ ಅಭಿನಯಿಸಿ, ಬಳಿಕ ತುಳು, ಕನ್ನಡ ಚಲನ ಚಿತ್ರಗಳ ಅಭಿನಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಡುಪಿ ಸಮೀಪದ ನಿಂಜೂರಿನ ಪ್ರೀತಮ್ ನಾಯಕ್ ಅವರಿಗೆ ಮುಂಬೈಯ ಕಲಾ ಜಗತ್ತು ಸಂಸ್ಥೆಯ ವತಿಯಿಂದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಆಡಿಟೋರಿಯಂನಲ್ಲಿ ಕಲಾ ಜಗತ್ತು ಮುಂಬೈ ಇದರ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಕನ್ನಡ ಸಿರಿ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಲಾ ಜಗತ್ತು ಮುಂಬೈ ಕಾರ್ಯಾಧ್ಯಕ್ಷ ಡಾ! ಸುರೇಂದ್ರ ಕುಮಾರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಕೋಶಾಧಿಕಾರಿ ಉತ್ತಮ ಶೆಟ್ಟಿಗಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರೀತಮ್ ನಾಯಕ್ ಅವರು ‘ಅಮೋಘ ಹಿರಿಯಡ್ಕ’ ಇದರ ಸಕ್ರಿಯ ಸದಸ್ಯರಾಗಿದ್ದು ಸಂಸ್ಥೆಯ ನೇತೃತ್ವದಲ್ಲಿ ನಡೆದ ಹಲವಾರು ನಾಟಕಗಳಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಇವುಗಳಲ್ಲಿ ಉಡುಪಿ, ಕುಂದಾಪುರ, ಮಂಡ್ಯ, ಮತ್ತು ‘ಮೈಸೂರು ದಸರಾ’ ಮುಂತಾದ ಕಡೆಗಳಲ್ಲಿ ಸತತ 14 ಪ್ರದರ್ಶನಗಳನ್ನು ಕಂಡಿರುವ ‘ರೈಲು ಭೂತ’ ನಾಟಕದಲ್ಲಿ ನಟಿಸಿ ಜನಮನ್ನಣೆ ಗಳಿಸಿರುತ್ತಾರೆ. ಸಂಗೀತ ಕ್ಷೇತ್ರದಲ್ಲೂ ಪ್ರೌಡಿಮೆಯನ್ನು ಹೊಂದಿರುವ ಅವರು ನಿಸ್ವಾರ್ಥ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ.