
ಹೊಸದಿಲ್ಲಿ: ದೀಪಾವಳಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಅ.21) ನಾಗರಿಕರಿಗೆ ಪತ್ರ ಬರೆದಿದ್ದು, ಈ ವರ್ಷದ ಹಬ್ಬವನ್ನು ರಾಷ್ಟ್ರೀಯ ಸಾಧನೆಗಳ ದೃಷ್ಟಿಯಿಂದ ವಿಶೇಷವೆಂದು ಬಣ್ಣಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಿಂದ 10 ರವರೆಗೆ ನಡೆಸಲಾದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಆಪರೇಷನ್ ಸಿಂದೂರ ಸಮಯದಲ್ಲಿ ನಾವು ಇದರ ಜೀವಂತ ಉದಾಹರಣೆಯನ್ನು ನೋಡಿದ್ದೇವೆ. ಭಾರತವು ಸದಾಚಾರವನ್ನು ಎತ್ತಿಹಿಡಿದಿದ್ದು ಮಾತ್ರವಲ್ಲದೆ ಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಂಡಿತು,” ಎಂದು ಹೇಳಿದರು.
“ಅಯೋಧ್ಯೆಯಲ್ಲಿ ರಾಮ ಮಂದಿರದ ಭವ್ಯ ನಿರ್ಮಾಣದ ನಂತರದ ಎರಡನೇ ದೀಪಾವಳಿ ಇದು. ಶ್ರೀರಾಮನು ನಮಗೆ ಸದಾಚಾರವನ್ನು ಎತ್ತಿಹಿಡಿಯಲು ಕಲಿಸುತ್ತಾನೆ; ಅನ್ಯಾಯದ ವಿರುದ್ಧ ಹೋರಾಡಲು ಧೈರ್ಯವನ್ನು ನೀಡುತ್ತಾನೆ,” ಎಂದು ಪತ್ರದಲ್ಲಿ ಬರೆದಿದ್ದಾರೆ.
ನಕ್ಸಲಿಸಂ ನಿರ್ಮೂಲನೆಯಿಂದ ಈ ದೀಪಾವಳಿ ವಿಶೇಷ
ಈ ವರ್ಷದ ದೀಪಾವಳಿಯು ವಿಶೇಷವಾಗಿದೆ ಎಂದು ಹೇಳಿದ ಪಿಎಂ ಮೋದಿ, ಅದಕ್ಕೆ ಕಾರಣವನ್ನು ತಿಳಿಸಿದರು: “ಮೊದಲ ಬಾರಿಗೆ, ತೀರ ಒಳನಾಡಿನ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಅನೇಕ ಜಿಲ್ಲೆಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ಬೇರು ಸಮೇತ ನಿರ್ಮೂಲನೆ ಮಾಡಿದ ಜಿಲ್ಲೆಗಳು ಇವು.”
“ಇತ್ತೀಚಿನ ದಿನಗಳಲ್ಲಿ, ನಮ್ಮ ದೇಶದ ಸಂವಿಧಾನದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿ, ಹಿಂಸಾಚಾರದ ಮಾರ್ಗವನ್ನು ತ್ಯಜಿಸಿ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುವ ಅನೇಕ ವ್ಯಕ್ತಿಗಳನ್ನು ನಾವು ನೋಡಿದ್ದೇವೆ. ಇದು ರಾಷ್ಟ್ರದ ಒಂದು ಪ್ರಮುಖ ಸಾಧನೆಯಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.



































