
ನವ ದೆಹಲಿ: ಜಾಗತಿಕ ಮಟ್ಟದಲ್ಲಿ ತಲೆದೂರಿರುವ ಆರ್ಥಿಕ ಅಸ್ಥಿರತೆ ಮತ್ತು ಇಂಧನ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡಲು ಕೇಂದ್ರ ಸರ್ಕಾರವು ಸಾರ್ವಜನಿಕರ ಸಹಕಾರವನ್ನು ಕೋರಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ಪ್ರಜೆಯೂ ‘ರಾಷ್ಟ್ರ ಮೊದಲು’ ಎಂಬ ಭಾವನೆಯೊಂದಿಗೆ ದೇಶದ ಆರ್ಥಿಕ ಶಕ್ತಿಯನ್ನು ವೃದ್ಧಿಸಲು 7 ಮಹತ್ವದ ಸಂಕಲ್ಪಗಳನ್ನು ಮಾಡುವಂತೆ ಮನವಿ ಮಾಡಿದ್ದಾರೆ.
ಪ್ರಸ್ತುತ ರಷ್ಯಾ-ಉಕ್ರೇನ್ ಸಂಘರ್ಷ ಸೇರಿದಂತೆ ವಿವಿಧ ಜಾಗತಿಕ ಕಾರಣಗಳಿಂದಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಇದು ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಂಧನ ಉಳಿತಾಯ ಮತ್ತು ಆಮದು ಅವಲಂಬನೆಯನ್ನು ತಗ್ಗಿಸುವ ಸಲುವಾಗಿ ಪ್ರಧಾನಿಯವರು ನಾಗರಿಕರಿಗೆ ಈ ಕೆಳಕಂಡ ಕಟ್ಟುನಿಟ್ಟಿನ ಸಲಹೆಗಳನ್ನು ನೀಡಿದ್ದಾರೆ.
ಈ ಏಳು ಸೂತ್ರಗಳನ್ನು ಪಾಲಿಸುವ ಮೂಲಕ ಭಾರತವು ಆರ್ಥಿಕವಾಗಿ ಸ್ವಾವಲಂಬಿಯಾಗಲು ಮತ್ತು ‘ವಿಕಸಿತ ಭಾರತ’ದ ಗುರಿಯನ್ನು ತಲುಪಲು ಸಾಧ್ಯ ಎಂದು ಸರ್ಕಾರ ಆಶಿಸಿದೆ. ಕೇವಲ ಸರ್ಕಾರದ ನೀತಿಗಳಿಂದ ಮಾತ್ರವಲ್ಲದೆ, ಜನರ ವೈಯಕ್ತಿಕ ಶಿಸ್ತಿನಿಂದಲೂ ದೇಶದ ಆರ್ಥಿಕತೆಯನ್ನು ರಕ್ಷಿಸಬಹುದು ಎಂಬುದು ಈ ಮನವಿಯ ಹಿಂದಿನ ಮುಖ್ಯ ಉದ್ದೇಶವಾಗಿದೆ.
ಆರ್ಥಿಕ ಸದೃಢತೆಗಾಗಿ ಪ್ರಧಾನಿಯವರ 7 ಪ್ರಮುಖ ಸೂತ್ರಗಳು:
- ಮತ್ತೆ ಮನೆಯಿಂದಲೇ ಕೆಲಸ (WFH): ಇಂಧನ ಬಳಕೆಯನ್ನು ಕನಿಷ್ಠಗೊಳಿಸಲು ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡಲು ಕಂಪನಿಗಳು ಹಾಗೂ ಉದ್ಯೋಗಿಗಳು ಸಾಧ್ಯವಿರುವ ಕಡೆಗಳಲ್ಲಿ ‘ವರ್ಕ್ ಫ್ರಮ್ ಹೋಮ್’ ಮಾದರಿಯನ್ನು ಮತ್ತೆ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.
- ಚಿನ್ನದ ವ್ಯಾಮೋಹಕ್ಕೆ ಬ್ರೇಕ್: ಭಾರತದ ವಿದೇಶಿ ವಿನಿಮಯದ ದೊಡ್ಡ ಭಾಗ ಚಿನ್ನದ ಆಮದಿಗೆ ವ್ಯಯವಾಗುತ್ತಿದೆ. ಆದ್ದರಿಂದ, ಕನಿಷ್ಠ 1 ವರ್ಷದವರೆಗೆ ಚಿನ್ನದ ಖರೀದಿ ಅಥವಾ ಹೂಡಿಕೆಯನ್ನು ಮುಂದೂಡುವಂತೆ ಪ್ರಧಾನಿ ಕೋರಿದ್ದಾರೆ.
- ಸಾರ್ವಜನಿಕ ಸಾರಿಗೆಗೆ ಆದ್ಯತೆ: ವೈಯಕ್ತಿಕ ಕಾರು ಮತ್ತು ಬೈಕ್ಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಮೆಟ್ರೋ ಹಾಗೂ ಬಸ್ಸುಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತೆ ಕರೆ ನೀಡಲಾಗಿದೆ.
- ಅಡುಗೆ ಎಣ್ಣೆ ಮಿತ ಬಳಕೆ: ಆರೋಗ್ಯದ ಹಿತದೃಷ್ಟಿಯಿಂದ ಮತ್ತು ವಿದೇಶಿ ಆಮದು ಕಡಿಮೆ ಮಾಡುವ ನಿಟ್ಟಿನಲ್ಲಿ ಅಡುಗೆ ಎಣ್ಣೆಯ ಬಳಕೆಯಲ್ಲಿ ಮಿತವ್ಯಯ ಸಾಧಿಸಲು ಸಲಹೆ ನೀಡಲಾಗಿದೆ.
- ನೈಸರ್ಗಿಕ ಕೃಷಿ ಪದ್ಧತಿ: ರಾಸಾಯನಿಕ ಗೊಬ್ಬರಗಳ ಆಮದಿನ ಮೇಲಿನ ಅವಲಂಬನೆಯನ್ನು ಶೇ. 50 ರಷ್ಟು ಕಡಿತಗೊಳಿಸಿ, ಸುಸ್ಥಿರ ನೈಸರ್ಗಿಕ ಕೃಷಿಗೆ ರೈತರು ಒತ್ತು ನೀಡಬೇಕು ಎಂದು ಆಶಿಸಲಾಗಿದೆ.
- ಸ್ವದೇಶಿ ವಸ್ತುಗಳ ಬಳಕೆ: ವಿದೇಶಿ ಬ್ರ್ಯಾಂಡ್ಗಳ ಬದಲು ‘ಮೇಕ್ ಇನ್ ಇಂಡಿಯಾ’ ಅಡಿ ತಯಾರಾದ ಸ್ಥಳೀಯ ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡುವ ಮೂಲಕ ಭಾರತೀಯ ಉದ್ದಿಮೆದಾರರನ್ನು ಬೆಂಬಲಿಸಲು ಸೂಚಿಸಿದ್ದಾರೆ.
- ವಿದೇಶ ಪ್ರವಾಸಗಳಿಗೆ ವಿರಾಮ: ಮುಂದಿನ 1 ವರ್ಷದ ಅವಧಿಗೆ ಯಾವುದೇ ಅನಗತ್ಯ ವಿದೇಶಿ ಪ್ರವಾಸಗಳನ್ನು ಕೈಗೊಳ್ಳದೆ, ದೇಶದ ಹಣ ವಿದೇಶಕ್ಕೆ ಹರಿಯದಂತೆ ತಡೆಯಲು ಮನವಿ ಮಾಡಲಾಗಿದೆ.
ಈ ಮೇಲಿನ ಕ್ರಮಗಳು ಕೇವಲ ತಾತ್ಕಾಲಿಕವಲ್ಲದೆ, ದೀರ್ಘಕಾಲಿಕವಾಗಿ ಭಾರತದ ರೂಪಾಯಿಯ ಮೌಲ್ಯವನ್ನು ಸ್ಥಿರವಾಗಿಡಲು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ನೆರವಾಗಲಿವೆ. ಪ್ರತಿಯೊಬ್ಬ ಭಾರತೀಯನೂ ಈ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡರೆ ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ವಿಶ್ಲೇಷಿಸಲಾಗಿದೆ.



































