
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ದುರದೃಷ್ಟಕರ ಘಟನೆಯೊಂದು ವರದಿಯಾಗಿದೆ. ವಸಾಯಿಯ ಸತವಲಿ ಪ್ರದೇಶದಲ್ಲಿರುವ ಖಾಸಗಿ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ನೀಡಿದ ಶಿಕ್ಷೆಯ ಕಾರಣದಿಂದ ಒಂದು ವಾರದ ನಂತರ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ.
ನವೆಂಬರ್ 8 ರಂದು, ಮೃತ ವಿದ್ಯಾರ್ಥಿನಿ ಮತ್ತು ಇತರ ನಾಲ್ವರು ವಿದ್ಯಾರ್ಥಿಗಳು ಶಾಲಾ ಸಮಯದ ನಂತರ ತಡವಾಗಿ ಆಗಮಿಸಿದ್ದರು. ಈ ಕಾರಣಕ್ಕಾಗಿ, ಶಾಲಾ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡು 100 ಬಾರಿ ಬಸ್ಕಿ ಹೊಡೆಯುವಂತೆ ವಿದ್ಯಾರ್ಥಿಗಳಿಗೆ ಕಠಿಣ ಶಿಕ್ಷೆ ನೀಡಲಾಗಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ (MNS) ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.
ಕಠಿಣ ಶಿಕ್ಷೆ ಅನುಭವಿಸಿದ ನಂತರ ಬಾಲಕಿಗೆ ತೀವ್ರವಾಗಿ ಕುತ್ತಿಗೆ ಮತ್ತು ಬೆನ್ನಿನ ನೋವು ಕಾಣಿಸಿಕೊಂಡಿದ್ದು, ಎದ್ದೇಳಲು ಸಹ ಕಷ್ಟವಾಗಿತ್ತು ಎಂದು ಮೃತಳ ತಾಯಿ ಹೇಳಿದ್ದಾರೆ. “ನನ್ನ ಮಗಳಿಗೆ ನೀಡಿದ ಈ ಅಮಾನವೀಯ ಶಿಕ್ಷೆಯೇ ಆಕೆಯ ಸಾವಿಗೆ ಕಾರಣ” ಎಂದು ಸಂತ್ರಸ್ತೆಯ ತಾಯಿ ಆಳಲು ತೋಡಿಕೊಂಡಿದ್ದಾರೆ.
ಆದಾಗ್ಯೂ, ಮೃತ ಬಾಲಕಿಗೆ ಈಗಾಗಲೇ ಆರೋಗ್ಯ ಸಮಸ್ಯೆಗಳು ಇದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಯಾವುದೇ ದೂರು ದಾಖಲಾಗಿಲ್ಲವಾದರೂ, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ. ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿನಿಗೆ ಕಠಿಣ ದೈಹಿಕ ಶಿಕ್ಷೆ ನೀಡಿರುವ ಈ ಘಟನೆಯು ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.



































