
ಇಸ್ಲಾಮಾಬಾದ್: ದಕ್ಷಿಣ ಏಷ್ಯಾದ ನೆರೆಹೊರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ವೈಮನಸ್ಸು ಈಗ ಯುದ್ಧದ ರೂಪ ಪಡೆದಿದೆ. ಕಳೆದ ವರ್ಷದ ‘ಆಪರೇಷನ್ ಸಿಂದೂರ್’ನಿಂದಾಗಿ ತತ್ತರಿಸಿದ್ದ ರಾವಲ್ಪಿಂಡಿಯ ಆಯಕಟ್ಟಿನ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಅಫ್ಘಾನ್ನ ತಾಲಿಬಾನ್ ಪಡೆಗಳು ಸಶಸ್ತ್ರ ಡ್ರೋನ್ ಮೂಲಕ ಪ್ರಬಲ ದಾಳಿ ನಡೆಸಿವೆ. ಈ ಬೆಳವಣಿಗೆಯಿಂದಾಗಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ಮಿಲಿಟರಿ ಉದ್ವಿಗ್ನತೆ ಮಿತಿ ಮೀರಿದೆ.
ವಿಶೇಷವೆಂದರೆ, 2025 ರ ಮೇ ತಿಂಗಳಲ್ಲಿ ಭಾರತದೊಂದಿಗಿನ 4 ದಿನಗಳ ಸಂಘರ್ಷದ ವೇಳೆ ಈ ವಾಯುನೆಲೆಯು ಭಾರೀ ಹಾನಿಗೊಳಗಾಗಿತ್ತು. ಕಳೆದ 9 ತಿಂಗಳಿಂದ ಇಲ್ಲಿ ಪುನರ್ನಿರ್ಮಾಣ ಕಾರ್ಯಗಳು ಚುರುಕಿನಿಂದ ಸಾಗುತ್ತಿದ್ದವು. ಆದರೆ ಈಗ ತಾಲಿಬಾನ್ ನಡೆಸಿದ ಹಠಾತ್ ದಾಳಿಯು ಪಾಕಿಸ್ತಾನದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯವು ತನ್ನ ಅಧಿಕೃತ ‘X’ ಖಾತೆಯಲ್ಲಿ ದಾಳಿಯ ಹೊಣೆಯನ್ನು ಒಪ್ಪಿಕೊಂಡಿದ್ದು, ಕೇವಲ ರಾವಲ್ಪಿಂಡಿ ಮಾತ್ರವಲ್ಲದೆ, ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ ಪಾಕಿಸ್ತಾನಿ ಸೇನೆಯ 12 ನೇ ವಿಭಾಗದ ಪ್ರಧಾನ ಕಚೇರಿ ಹಾಗೂ ಖೈಬರ್ ಪಖ್ತುಂಖ್ವಾದ ಪ್ರಮುಖ ಮಿಲಿಟರಿ ತಾಣಗಳ ಮೇಲೆಯೂ ವಾಯುದಾಳಿ ನಡೆಸಿರುವುದಾಗಿ ಘೋಷಿಸಿದೆ.
ಈ ಸಂಘರ್ಷದ ಸಾವು-ನೋವುಗಳ ಬಗ್ಗೆ ಉಭಯ ದೇಶಗಳು ಭಿನ್ನ ಹೇಳಿಕೆಗಳನ್ನು ನೀಡಿವೆ. ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಅವರು, “ನಮ್ಮ ಪಡೆಗಳು ಅಫ್ಘಾನಿಸ್ತಾನದ 46 ಅಡಗುತಾಣಗಳನ್ನು ಧ್ವಂಸಗೊಳಿಸಿದ್ದು, ಸುಮಾರು 415 ಅಫ್ಘಾನ್ ಸೈನಿಕರನ್ನು ಹತಗೆಯಲಾಗಿದೆ,” ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಫ್ಘಾನ್ ಉಪ ವಕ್ತಾರ ಫಿತ್ರತ್ ಅವರು, ತಾವು ಪಾಕಿಸ್ತಾನದ 27 ಮಿಲಿಟರಿ ಚೆಕ್ಪೋಸ್ಟ್ಗಳನ್ನು ವಶಪಡಿಸಿಕೊಂಡಿದ್ದು, 80 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಪ್ರತಿಪಾದಿಸಿದ್ದಾರೆ.
ಸದ್ಯ ಗಡಿ ಭಾಗದಲ್ಲಿ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿದ್ದು, ಅಂತರಾಷ್ಟ್ರೀಯ ಸಮುದಾಯ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.



































