
ಉಡುಪಿ : ಉಡುಪಿಯ ಕೋರ್ಟ್ ಹಿಂಭಾಗದ ಲೋಕೋಪಯೋಗಿ ಇಲಾಖೆ (PWD) ಕಚೇರಿ ಬಳಿ ನಡೆದ ಕ್ರೇನ್ ದುರ್ಘಟನೆ ಒಂದರಲ್ಲಿ ಹಿರಿಯ ನಾಗರಿಕರು ಸಾವಿಗೀಡಾಗಿದ್ದು, ಜೊತೆಗೆ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಫ್ರಾನ್ಸಿಸ್ ಫುರ್ಟಾಡೊ (65) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಶಾರದಾ (35) ಎಂಬ ಕೆಲಸದಾಕೆಯನ್ನು ತಕ್ಷಣವೇ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರಗಳ ಪ್ರಕಾರ, ಫ್ರಾನ್ಸಿಸ್ ಫುರ್ಟಾಡೊ ಅವರು ತಮ್ಮ ಸಹೋದರನ ಮನೆಯಲ್ಲಿ ಸ್ಲ್ಯಾಬ್ ಸೋರಿಕೆಯನ್ನು ಪರಿಶೀಲಿಸಲು ಕ್ರೇನ್ ಅನ್ನು ಕರೆಸಿದ್ದರು. ಅವರು ಕೆಲಸದಾಕೆ ಶಾರದಾ ಅವರೊಂದಿಗೆ ಕ್ರೇನ್ ತೊಟ್ಟಿಲಿಗೆ ಏರಿ ಮೇಲ್ಮಹಡಿಗೆ ಹೋಗಿದ್ದಾಗ, ತೊಟ್ಟಿಲಿನ ಬೆಲ್ಟ್ ತುಂಡಾಗಿ ವಾಲಿಕೊಂಡು , ಇಬ್ಬರೂ ಆಕಸ್ಮಿಕವಾಗಿ ನೆಲಕ್ಕುರುಳಿದರು.

ಘಟನೆ ಕುರಿತು ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಕ್ಷಣವೇ ತಮ್ಮ ಅಂಬುಲೆನ್ಸ್ನಲ್ಲಿ ಗಾಯಾಳುಗಳನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ ದಾರಿ ಮಧ್ಯೆ ಫ್ರಾನ್ಸಿಸ್ ಫುರ್ಟಾಡೊ ಅವರು ಮೃತರಾದರೆಂದು ವೈದ್ಯರು ದೃಢಪಡಿಸಿದರು. ಶಾರದಾ ಅವರ ಸ್ಥಿತಿಯು ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಘಟನೆಯ ನಂತರ ಕ್ರೇನ್ ಚಾಲಕ ಸ್ಥಳದಿಂದ ಪರಾರಿಯಾದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆತನು ಗಾಯಾಳುಗಳಿಗೆ ಸಹಾಯ ಮಾಡದೆ ಓಡಿ ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.