
ಬೆಳ್ತಂಗಡಿ : ಧನು ಪೂಜೆಗೆಂದು ಹೋದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಸುಮಂತ್ (15) ಬಾವಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಾಗಿದ್ದ ಈ ಕೇಸನ್ನು ಪೊಲೀಸರು ಈಗ ‘ಕೊಲೆ ಪ್ರಕರಣ’ವಾಗಿ ಪರಿವರ್ತಿಸಿ ತನಿಖೆ ತೀವ್ರಗೊಳಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಪಂಚಾಯತ್ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ಬರಮೇಲು ಎಂಬಲ್ಲಿ ಬುಧವಾರ (ಜ.14) ಈ ಘಟನೆ ಸಂಭವಿಸಿತ್ತು. ಬಾಲಕ ಸುಮಂತ್ ನಾಪತ್ತೆಯಾದ ಕೆಲವೇ ಗಂಟೆಗಳಲ್ಲಿ ಸಮೀಪದ ಬಾವಿಯೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿತ್ತು. ಆದರೆ, ಶವ ಪತ್ತೆಯಾದ ಸ್ಥಳದ ಸುತ್ತಮುತ್ತ ರಕ್ತದ ಕಲೆಗಳು ಕಂಡುಬಂದಿದ್ದು ಹಾಗೂ ಬಾಲಕನ ತಲೆಯ ಮೇಲೆ ತೀವ್ರವಾದ ಗಾಯಗಳ ಗುರುತುಗಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಂತೆ ಬಾಲಕ ನೀರಿಗೆ ಬಿದ್ದಾಗ ಬದುಕಿದ್ದ ಎಂಬ ಅಂಶ ತಿಳಿದುಬಂದಿದ್ದರೂ, ತಲೆಯ ಮೇಲಿನ ಗಂಭೀರ ಗಾಯಗಳಿಗೆ ಸ್ಪಷ್ಟ ಕಾರಣ ಸಿಕ್ಕಿಲ್ಲ.
ಈ ಹಿನ್ನೆಲೆಯಲ್ಲಿ ಪ್ರಕರಣದ ಸತ್ಯಾಸತ್ಯತೆ ಹೊರತರಲು ಬೆಳ್ತಂಗಡಿ ಡಿಎಸ್ಪಿ ನೇತೃತ್ವದಲ್ಲಿ 4 ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ. ಸಾಕ್ಷ್ಯಗಳ ಹುಡುಕಾಟಕ್ಕಾಗಿ ಪೊಲೀಸರು ಬಾವಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿಸುತ್ತಿದ್ದು, ಸುತ್ತಮುತ್ತಲಿನ ಕಾಡಿನ ಪ್ರದೇಶದಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ. ಬಾಲಕ ತಾನಾಗಿಯೇ ಬಾವಿಗೆ ಬಿದ್ದನೇ ಅಥವಾ ಯಾರಾದರೂ ತಳ್ಳಿದ್ದಾರೆಯೇ ಎಂಬ ನಿಟ್ಟಿನಲ್ಲಿ ತನಿಖೆ ಸಾಗುತ್ತಿದೆ.



































