
ನವದೆಹಲಿ: ಭಾರತೀಯ ಜನತಾ ಪಕ್ಷದ ಸಾರಥ್ಯವನ್ನು ವಹಿಸಿಕೊಂಡಿರುವ ನಿತಿನ್ ನಬಿನ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಮಂಗಳವಾರ (ಜ.20) ನಡೆದ ಭವ್ಯ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿಯವರು, ಪಕ್ಷದ ಶಿಸ್ತು ಮತ್ತು ಸಂಘಟನಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಹೊಸ ಅಧ್ಯಕ್ಷರಿಗೆ ಶುಭ ಹಾರೈಸಿದರು.
“ಪಕ್ಷದ ವಿಚಾರಕ್ಕೆ ಬಂದಾಗ ನಿತಿನ್ ನಬಿನ್ ಅವರೇ ನಮ್ಮ ಬಾಸ್ ಮತ್ತು ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ” ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಅವರು ಬಿಜೆಪಿಯ ಆಂತರಿಕ ಪ್ರಜಾಪ್ರಭುತ್ವ ಮತ್ತು ಕಾರ್ಯಕರ್ತ ಆಧಾರಿತ ಸಂಸ್ಕೃತಿಯನ್ನು ಪುನರುಚ್ಚರಿಸಿದರು. ಸಂಘಟನೆಯೇ ಶಕ್ತಿ ಎಂದು ನಂಬಿರುವ ಪ್ರಧಾನಿಯವರ ಈ ಮಾತುಗಳು ನೆರೆದಿದ್ದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿತು. ಬಿಜೆಪಿ ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿರುವುದು ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಎಂದು ಅವರು ಶ್ಲಾಘಿಸಿದರು.
ಬಲಿಷ್ಠ ಸಂಘಟನೆಗೆ ಕರೆ: ಈ ಹಿಂದೆ ಪಕ್ಷವನ್ನು ಮುನ್ನಡೆಸಿದ ಅಮಿತ್ ಶಾ, ವೆಂಕಯ್ಯ ನಾಯ್ಡು ಮತ್ತು ಜೆ.ಪಿ. ನಡ್ಡಾ ಅವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ, ಸಂಘಟನಾತ್ಮಕವಾಗಿ ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಅಗತ್ಯವಿದೆ ಎಂದರು. “ನಮ್ಮ ಸಂಕಲ್ಪವು ದೊಡ್ಡ ಮಟ್ಟದಲ್ಲಿ ನನಸಾಗಬೇಕಿದೆ, ಅದಕ್ಕಾಗಿ ಪ್ರತಿಯೊಬ್ಬ ಕಾರ್ಯಕರ್ತರು ನಿರಂತರವಾಗಿ ಶ್ರಮಿಸಬೇಕು” ಎಂದು ಅವರು ಕರೆ ನೀಡಿದರು.
ದಕ್ಷಿಣದ ರಾಜ್ಯಗಳಲ್ಲಿ ಕಮಲ ಅರಳುವ ವಿಶ್ವಾಸ: ಬಿಜೆಪಿಯ ನಿರ್ಗಮಿತ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಾತನಾಡಿ, ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಬಿಜೆಪಿ ಮುಂಬರುವ ದಿನಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕೇರಳದಂತಹ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭದ್ರವಾಗಿ ನೆಲೆವೂರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಸ್ಸಾಂನಲ್ಲಿ ಮತ್ತೆ ಅಧಿಕಾರ ಹಿಡಿಯುವುದರ ಜೊತೆಗೆ ಬಂಗಾಳದಲ್ಲಿಯೂ ಕಮಲ ಪೂರ್ಣ ಪ್ರಮಾಣದಲ್ಲಿ ಅರಳಲಿದೆ ಎಂದು ನಡ್ಡಾ ಭವಿಷ್ಯ ನುಡಿದರು.



































