
ಉಡುಪಿ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಮತ್ತು ಈಟಿವಿ ಭಾರತ್ನ ಜಿಲ್ಲಾ ವರದಿಗಾರರಾದ ಸಂದೀಪ್ ಪೂಜಾರಿ (37) ಅವರು ಏಪ್ರಿಲ್ 20ರಂದು ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಮಾರ್ಚ್ 29ರಂದು ಸಕಲೇಶಪುರ ಸಮೀಪದ ಬಾಳ್ಳುಪೇಟೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದು, ಬೆನ್ನು ಹುರಿಗೆ (ಸ್ಪೈನಲ್ ಕಾಡ್) ಗಂಭೀರ ಪೆಟ್ಟು ಬಿದ್ದಿತ್ತು. ನಿರಂತರ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಉಡುಪಿ ಜಿಲ್ಲೆಯ ಶಿರ್ವ ನಿವಾಸಿಯಾದ ಸಂದೀಪ್, ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಪಬ್ಲಿಕ್ ಟಿವಿ, ಸ್ಪಂದನಾ ನ್ಯೂಸ್, ಬಿ ಟಿವಿ ವಾಹಿನಿಗಳಲ್ಲಿ ಕ್ಯಾಮೆರಮೆನ್ ಹಾಗೂ ವರದಿಗಾರರಾಗಿ ಕೆಲಸ ಮಾಡಿದ ಅವರು, ಇತ್ತೀಚೆಗೆ ಈಟಿವಿ ಭಾರತ್ನಲ್ಲಿ ವರದಿಗಾರರಾಗಿದ್ದರು. ಅಲ್ಲದೇ, ಸಿ4ಯು ಮತ್ತು ಪ್ರೈಮ್ ಕಾರ್ಲ ಲೈವ್ ವಾಹಿನಿಗಳಲ್ಲಿ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿರುವ ಅವರು ಮಾಧ್ಯಮ ಕ್ಷೇತ್ರದಲ್ಲಿ ಶ್ರಮಿಸಿ ಹೆಸರು ಮಾಡಿದ್ದರು. ಅವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.