
ಬೆಳ್ತಂಗಡಿ: ಕಣಿಯೂರು ನಿವಾಸಿ ಮತ್ತು ನವವಿವಾಹಿತೆ ಪೂಜಾಶ್ರೀ (23) ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ ಪತ್ನಿ ಪೂಜಾಶ್ರೀ ಮೂಲತ: ಕಣಿಯೂರು ಗ್ರಾಮದ ನೆಲ್ಲಿಬಾಕಿಮಾರು ಮನೆಯ ವಾರಿಜ ಮತ್ತು ಸೇಸಪ್ಪ ಪೂಜಾರಿ ದಂಪತಿಯ ಪುತ್ರಿ. ಅವರು 10 ತಿಂಗಳ ಹಿಂದೆ ಮದುವೆಯಾಗಿದ್ದರು.
ಪೂಜಾಶ್ರೀ ಕೆಲಸ ಹುಡುಕುತ್ತಿದ್ದರು ಎಂದು ತಿಳಿದುಬಂದಿದೆ. ಇದೇ ನೆಪದಲ್ಲಿ ಪತಿ ಪ್ರಕಾಶ್ ಅವರು ಪೂಜಾಶ್ರೀಯನ್ನು ಬೆಂಗಳೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಅಲ್ಲಿ ಮಾರ್ಚ್ 1ರಂದು ಪೂಜಾಶ್ರೀ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು. ಪತಿ ಪ್ರಕಾಶ್ ಅವರು ಬದ್ಯಾರು ಬರಾಯದ ತಮ್ಮ ಮನೆಯಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದರು.
ಪೂಜಾಶ್ರೀಯ ಸಾವಿನ ಬಗ್ಗೆ ಅವರ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಬೆಂಗಳೂರಿನ ಜಾಲಹಳ್ಳಿ ಬಾಗಲಕುಂಟೆ ಠಾಣೆಯಲ್ಲಿ ದಾಖಲಾಗಿದೆ. ಪೂಜಾಶ್ರೀಯ ಆತ್ಮಹತ್ಯೆಗೆ ಕಾರಣಗಳು ಮತ್ತು ಸುತ್ತಮುತ್ತಲಿನ ಸನ್ನಿವೇಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.