
ಉಡುಪಿ : ಉಡುಪಿ ನಗರ ವ್ಯಾಪ್ತಿಯ ಆಟೋ ನಿಲ್ದಾಣಗಳಲ್ಲಿ ಸಾಮರಸ್ಯ ಹಾಗೂ ಬಿಕ್ಕಟ್ಟು ನಿವಾರಣೆಯ ದೃಷ್ಟಿಯಿಂದ ಚಾಲಕರ ಮತ್ತು ಮಾಲಕರ ಒಕ್ಕೂಟ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಯಾವುದೇ ನಿಲ್ದಾಣದಲ್ಲಿ 5 ರಿಕ್ಷಾಗಳಿಗಿಂತ ಕಡಿಮೆ ಆಟೋಗಳಿದ್ದಲ್ಲಿ, ಇತರ ನಿಲ್ದಾಣದ ಆಟೋಗಳು ಅಲ್ಲಿ ಬಾಡಿಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಇತ್ತೀಚೆಗೆ ಕೆಲವೊಂದು ನಿಲ್ದಾಣಗಳಲ್ಲಿ ನಡೆದ ಗಲಾಟೆಗಳಿಂದ ಚಾಲಕರಿಗೆ ತೊಂದರೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಕೇಸುಗಳು ಹೆಚ್ಚಾಗಿದ್ದವು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಒಕ್ಕೂಟವು ಒಗ್ಗಟ್ಟಿನಿಂದ ಹೊಸ ನಿಯಮವನ್ನು ಜಾರಿಗೆ ತರಲು ಬದ್ಧವಾಗಿದೆ.
ಸಭೆಯ ನಂತರ ಚಾಲಕರು ಕಾಲ್ನಡಿಗೆ ಮೂಲಕ ಎಸ್ಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಎಸ್ಪಿ ಹರಿರಾಮ್ ಶಂಕರ್ ಮಾತನಾಡಿ, ನಗರಸಭೆ, ಆರ್.ಟಿ.ಒ ಹಾಗೂ ಪೊಲೀಸ್ ಇಲಾಖೆ ಸೇರಿ ನಗರದಲ್ಲಿನ ಆಟೋ ನಿಲ್ದಾಣಗಳ ಸ್ಥಿತಿಗತಿಯ ಬಗ್ಗೆ ಸರ್ವೇ ನಡೆಸಲಾಗಿದೆ. ಹೊಸ ನಿಲ್ದಾಣ ನಿರ್ಮಾಣದ ಪ್ರಸ್ತಾವನೆ ಜಿಲ್ಲಾಡಳಿತದ ಮುಂದೆ ಇಡಲಾಗಿದ್ದು, ಶೀಘ್ರದಲ್ಲೇ ಅವುಗಳ ಅನುಮೋದನೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.