
ಮಹಾರಾಷ್ಟ್ರ : ಮಹಾರಾಷ್ಟ್ರದ ಬುಲ್ತಾನಾ ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆಯ ಹೊಸ ರೂಪವೇ ಬೆಳಕಿಗೆ ಬಂದಿದೆ. ಕೆಲ ತಿಂಗಳ ಹಿಂದೆ ಹಳ್ಳಿಗಳಲ್ಲಿ ಕೂದಲು ಉದುರುವಿಕೆಯ ಪ್ರಕರಣಗಳು ಹೆಚ್ಚಾಗಿದ್ದವು. ಇದೀಗ, ಈ ಕೂದಲು ಉದುರಿದವರಲ್ಲಿಯೇ ಸುಮಾರು 10-12 ಜನರು ತಮ್ಮ ಉಗುರುಗಳನ್ನು ಕಳೆದುಕೊಳ್ಳುತ್ತಿರುವ ಘಟನೆ ವರದಿಯಾಗಿದೆ.
ಈ ಅಪರೂಪದ ಸ್ಥಿತಿಯ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಂಡವು ಆಗಲೇ ಈ ಹಳ್ಳಿಗಳನ್ನು ಭೇಟಿ ನೀಡಿ ವಿವಿಧ ಮಾದರಿಗಳನ್ನು ಸಂಗ್ರಹಿಸಿತ್ತು. ಪ್ರಾಥಮಿಕ ವರದಿಯ ಪ್ರಕಾರ, ದೇಹದಲ್ಲಿ ಸೆಲೆನಿಯಮ್ ಅಂಶದ ಪ್ರಮಾಣ ಹೆಚ್ಚಾಗಿರುವುದೇ ಈ ಸಮಸ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಗ್ರಾಮಸ್ಥರು ಈಗ ಮತ್ತಷ್ಟು ಆತಂಕದಲ್ಲಿದ್ದು, ತಮ್ಮ ಆರೋಗ್ಯದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಜಿಲ್ಲಾ ಆರೋಗ್ಯ ಇಲಾಖೆ ತುರ್ತಾಗಿ ಸ್ಥಳಕ್ಕೆ ಧಾವಿಸಿ ಹೊಸದಾಗಿ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿದೆ.
ಸ್ಥಳೀಯರು ಈ ಸ್ಥಿತಿಗೆ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳ ಗಮನ ಸೆಳೆದಿದ್ದು, ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.