
ಕೊಲ್ಲೂರು : ದೇವಿಯ ಅನುಗ್ರಹದ ಕನಸಿಗೆ ನೈಜ ರೂಪ ನೀಡಿದ ಭಕ್ತರು, ಸುಮಾರು ₹90 ಲಕ್ಷ ಮೌಲ್ಯದ ನವರತ್ನ ಕಲ್ಲುಗಳೊಂದಿಗೆ ಅಲಂಕೃತವಾದ 1 ಕೆ.ಜಿ ತೂಕದ ಚಿನ್ನದ ಮುಖವಾಡವನ್ನು ಬುಧವಾರ ಶ್ರೀ ಮೂಕಾಂಬಿಕಾ ದೇವಿಗೆ ಸಮರ್ಪಿಸಿದ್ದಾರೆ.
ಈ ಪವಿತ್ರ ಸೇವೆಯನ್ನು ತುಮಕೂರು ಜಿಲ್ಲೆಯ ಶಿರಾದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ| ಕೆ. ಲಕ್ಷ್ಮೀನಾರಾಯಣ ಅವರ ಕುಟುಂಬವಿಂದು ನೀಡಿದ್ದು , ಅವರು 45 ವರ್ಷಗಳ ಹಿಂದೆಯೇ ದೇವಿಗೆ ಚಿನ್ನದ ಮುಖವಾಡ ಸಮರ್ಪಿಸಲು ಸಂಕಲ್ಪ ಮಾಡಿಕೊಂಡಿದ್ದರು. ಆ ಸಂಕಲ್ಪ ಇಂದು ಸಂಪೂರ್ಣಗೊಂಡಿದೆ.
ಬುಧವಾರ ಬೆಳಿಗ್ಗೆ ರಥಬೀದಿಯಿಂದ ವಾದ್ಯಘೋಷದೊಂದಿಗೆ ಶೋಭಾ ಯಾತ್ರೆಯ ರೂಪದಲ್ಲಿ ಚಿನ್ನದ ಮುಖವಾಡವನ್ನು ದೇಗುಲದ ಆವರಣಕ್ಕೆ ತಂದು, ಅರ್ಚಕರಾದ ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್ ಮತ್ತು ಕಾಳಿದಾಸ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ದೇವಿಗೆ ಅರ್ಪಿಸಲಾಯಿತು.
ಈ ವೇಳೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತಕುಮಾರ್ ಶೆಟ್ಟಿ, ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ಸುಧಾ ಹಾಗೂ ಇತರ ಗಣ್ಯರು ಹಾಜರಿದ್ದರು.
ಈಚೆಗೆ ಜೂನ್ 10ರಂದು ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಶೃಂಗೇರಿ ಶಾರದಾಂಬಾ ದೇವಸ್ಥಾನದಲ್ಲಿ ಈ ಮುಖವಾಡಕ್ಕೆ ಪೂರ್ವ ಪೂಜೆ ನೆರವೇರಿಸಲಾಗಿತ್ತು.