
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದಲ್ಲಿ ಭಾನುವಾರ ಸಂಭವಿಸಿದ ಭಾರಿ ಮಳೆಯಿಂದಾಗಿ ನಾಡಕಚೇರಿ ಕಾರ್ಯಾಲಯವಾಗಿ ಬಳಸಲಾಗುತ್ತಿದ್ದ ಹಳೆಯ ಕಟ್ಟಡವು ಸಂಪೂರ್ಣವಾಗಿ ಧರೆಗುರುಳಿದ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಘಟನೆಯ ಸಮಯದಲ್ಲಿ ಕೆಲವು ಅಧಿಕಾರಿಗಳು ಹಾಗೂ ಜನರು ಕಚೇರಿಯೊಳಗಿದ್ದರೂ ತಕ್ಷಣವೇ ಹೊರಬಂದಿದ್ದರಿಂದ ಪ್ರಾಣಾಪಾಯ ತಪ್ಪಿದೆ.
ಈ ಘಟನೆಯು ದೊಡ್ಡ ಅನಾಹುತವಾಗಬಲ್ಲದ್ದಾಗಿದ್ದರೂ, ಸೂಕ್ಷ್ಮ ಸಮಯದಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಹೊರಬಂದಿದ್ದು ಭಾರೀ ದುರ್ಘಟನೆಯನ್ನು ತಪ್ಪಿಸಿದೆ. ಆದರೆ ನಾಡಕಚೇರಿಯ ಅಪಾರ ದಾಖಲೆಗಳು ಮಣ್ಣಿನಲ್ಲಿ ಹೂತುಹೋಗಿವೆ ಎಂಬ ಮಾಹಿತಿ ದೃಢವಾಗಿದೆ.
ಇಲ್ಲಿ ವಿಶೇಷ ಗಮನ ಸೆಳೆಯುತ್ತಿರುವ ವಿಷಯವೆಂದರೆ,ಈ ಕಟ್ಟಡವು ಸುಮಾರು 50 ವರ್ಷ ಹಳೆಯ ಶಾಲಾ ಕಟ್ಟಡವಾಗಿದ್ದು, ಈ ಕಟ್ಟಡಕ್ಕೆ ಕೇವಲ ಒಂದು ವರ್ಷ ಹಿಂದಷ್ಟೇ ಸರಕಾರದ ವತಿಯಿಂದ ₹5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದುರಸ್ತಿಯ ಕಾಮಗಾರಿ ನಡೆದಿತ್ತು. ಇಷ್ಟು ಕಡಿಮೆ ಅವಧಿಯಲ್ಲಿಯೇ ಕಟ್ಟಡ ಕುಸಿದಿರುವುದರಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಮತ್ತು ಅನುಮಾನ ವ್ಯಕ್ತವಾಗುತ್ತಿದೆ.
ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾತ್ಕಾಲಿಕವಾಗಿ ನಾಡಕಚೇರಿ ಸೇವೆಗಳಿಗಾಗಿ ಬೇರೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಬೆಳವಣಿಗೆಯ ನಂತರ, ಜನತೆ ಶಾಶ್ವತ, ಸುರಕ್ಷಿತ ಕಟ್ಟಡಕ್ಕಾಗಿ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.