
ಮೈಸೂರು: ರಾಜ್ಯದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯೊಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಕೆಲಸ ಅರಸಿ ಬಂದಿದ್ದ ಯುವಕನೊಬ್ಬನನ್ನು ಅಪಹರಿಸಿ, ಆತನಿಗೆ ಬಲವಂತವಾಗಿ ಸ್ತ್ರೀ ವೇಷ ಧರಿಸಿ, ಲೈಂಗಿಕ ವೃತ್ತಿ ಹಾಗೂ ಹಣ ವಸೂಲಿಗೆ ಬಳಸಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಆತನಿಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಲು ಸಂಚು ರೂಪಿಸಿದ್ದ ಜಾಲದ ವಿರುದ್ಧ ಇದೀಗ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ.
ನಂಜನಗೂಡಿನ ತ್ಯಾಗರಾಜ ಕಾಲೋನಿ ನಿವಾಸಿಯಾದ ಅನಿಲ್ ಕುಮಾರ್ (ಅಕ್ಷತಾ) ಎಂಬುವವರೇ ಈ ಕೃತ್ಯಕ್ಕೆ ಬಲಿಯಾದ ದುರ್ದೈವಿ. ಸುಮಾರು 4 ತಿಂಗಳ ಹಿಂದೆ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದಾಗ, ಮಂಗಳೂರು ಮೂಲದ ಅನಿತಾ ಎಂಬ ಮಂಗಳಮುಖಿ ನೇತೃತ್ವದ ತಂಡ ಅನಿಲ್ನನ್ನು ಅಪಹರಿಸಿತ್ತು ಎನ್ನಲಾಗಿದೆ. ಮಾದಕ ದ್ರವ್ಯ ನೀಡಿ ಪ್ರಜ್ಞೆ ತಪ್ಪಿಸಿ ಮಂಗಳೂರಿಗೆ ಕರೆದೊಯ್ದು, ಅಲ್ಲಿ ಆತನಿಗೆ ಬಲವಂತವಾಗಿ ಸೀರೆ ಉಡಿಸಿ ಮಂಗಳಮುಖಿಯನ್ನಾಗಿ ಪರಿವರ್ತಿಸಲಾಗಿದೆ.
ಈ ದಂಧೆಕೋರರ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದಿರುವ ಯುವಕ, ಈಗ ತನಗೆ ನ್ಯಾಯ ಬೇಕೆಂದು ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿಸಿ, ಅಕ್ರಮ ದಂಧೆಗೆ ಬಳಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಯುವಕ ಮನವಿ ಮಾಡಿದ್ದಾನೆ.
ಘಟನೆಯ ಪ್ರಮುಖ ಮುಖ್ಯಾಂಶಗಳು:
- ಕಿಡ್ನಾಪ್ ಹಾಗೂ ಬಲವಂತದ ವೇಷ: 4 ತಿಂಗಳ ಹಿಂದೆ ಮೈಸೂರಿನಲ್ಲಿ ಅನಿಲ್ನನ್ನು ಕಿಡ್ನಾಪ್ ಮಾಡಿ ಮಂಗಳೂರಿಗೆ ಸಾಗಿಸಲಾಗಿತ್ತು.
- ಹಣ ವಸೂಲಿ ಮತ್ತು ಸೆಕ್ಸ್ ವರ್ಕ್: ಯುವಕನಿಗೆ ಬಲವಂತವಾಗಿ ಲೈಂಗಿಕ ವೃತ್ತಿ ಮಾಡಿಸಿ, ಪ್ರತಿದಿನ 2000 ದಿಂದ 3000 ರೂಪಾಯಿ ಕಲೆಕ್ಷನ್ ಮಾಡಿಸಿಕೊಳ್ಳಲಾಗುತ್ತಿತ್ತು.
- ದಾಖಲೆಗಳ ಸೃಷ್ಟಿ: ಯುವಕನ ಹೆಸರಿನಲ್ಲಿ ಮಂಗಳಮುಖಿ ಎಂದು ಗುರುತಿನ ಚೀಟಿ ಹಾಗೂ ಸರ್ಕಾರಿ ಪ್ರಮಾಣಪತ್ರಗಳನ್ನು ಅಕ್ರಮವಾಗಿ ಪಡೆಯಲಾಗಿದೆ.
- ಶಸ್ತ್ರಚಿಕಿತ್ಸೆಯ ಸಂಚು: ಮುಂಬೈಗೆ ಕರೆದೊಯ್ದು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಲು ಆರೋಪಿಗಳು ಸ್ಕೆಚ್ ಹಾಕಿದ್ದರು.
- ಬೆದರಿಕೆ: ದಂಧೆಯಿಂದ ಹೊರಬಂದ ಯುವಕನ ಮೇಲೆ ಸುಳ್ಳು ಕಳ್ಳತನದ ಕೇಸ್ ದಾಖಲಿಸುವುದಾಗಿ ಅನಿತಾ ಎಂಬಾಕೆ ಧಮಕಿ ಹಾಕಿದ್ದಾಳೆ.
ಈ ಕರಾಳ ದಂಧೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಸಂತ್ರಸ್ತ, ತಾನು ಸಂಪಾದಿಸಿದ ಹಣವನ್ನು ಕೇಳಿದ್ದಕ್ಕೆ ತನ್ನ ಮೇಲೆ 5 ಲಕ್ಷ ರೂಪಾಯಿ ಹಾಗೂ ಚಿನ್ನಾಭರಣ ಕಳ್ಳತನದ ಆರೋಪ ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ನಂಜನಗೂಡಿನ ಮನೆಯಲ್ಲಿದ್ದರೂ ಸಹ, ಆರೋಪಿಗಳು ಅಲ್ಲಿಗೂ ಬಂದು ಗಲಾಟೆ ಮಾಡುತ್ತಾ ಮತ್ತೆ ದಂಧೆಗೆ ಮರಳುವಂತೆ ಒತ್ತಾಯಿಸುತ್ತಿದ್ದಾರೆ. ಸ್ಥಳೀಯ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಯುವಕ ಈಗ ಮೈಸೂರು ನಗರ ಪೊಲೀಸರ ಮೊರೆ ಹೋಗಿದ್ದಾನೆ.













