
ಮೈಸೂರು: ದಸರಾ ನಾಡಹಬ್ಬವನ್ನು ಉದ್ಘಾಟಿಸಲು ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಒಂದು ಜಾತ್ಯಾತೀತ ಹಬ್ಬವಾಗಿದ್ದು, ಅದನ್ನು ಯಾವ ಧರ್ಮದವರು ಬೇಕಾದರೂ ಉದ್ಘಾಟಿಸಬಹುದು ಎಂದು ಸ್ಪಷ್ಟಪಡಿಸಿದರು.
ದಸರಾ ಉದ್ಘಾಟಕರ ಆಯ್ಕೆ ಸಮರ್ಥನೆ:
ದಸರಾ ಉದ್ಘಾಟಕರ ಆಯ್ಕೆಗೆ ತಮಗೆ ಉನ್ನತ ಮಟ್ಟದ ಸಮಿತಿಯು ಅಧಿಕಾರ ನೀಡಿತ್ತು ಎಂದು ಸಿದ್ದರಾಮಯ್ಯ ತಿಳಿಸಿದರು. “ಬುಕರ್ ಪ್ರಶಸ್ತಿ ವಿಜೇತೆಯಾದ ಬಾನು ಮುಷ್ತಾಕ್ ಅವರಿಗೆ ಈ ಅವಕಾಶ ನೀಡಲು ತೀರ್ಮಾನಿಸಲಾಯಿತು. ಹಿಂದೆ ಕವಿ ಎನ್.ಎಸ್. ನಿಸಾರ್ ಅಹಮದ್ ಅವರೂ ದಸರಾ ಉದ್ಘಾಟಿಸಿದ್ದರು. ದಸರಾ ನಾಡಹಬ್ಬ ಮತ್ತು ಸಾಂಸ್ಕೃತಿಕ ಆಚರಣೆಯಾಗಿದೆ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ. ಇದು ಎಲ್ಲರಿಗೂ ಸೇರಿದ ಹಬ್ಬ” ಎಂದು ಅವರು ವಿವರಿಸಿದರು.
ಇತಿಹಾಸದ ನಿದರ್ಶನಗಳನ್ನು ನೀಡಿದ ಮುಖ್ಯಮಂತ್ರಿ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಕಾಲದಲ್ಲಿ ಕೂಡ ದಸರಾ ಆಚರಿಸಲಾಗುತ್ತಿತ್ತು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರೂ ದಸರಾ ಹಬ್ಬದಲ್ಲಿ ಭಾಗವಹಿಸುತ್ತಿದ್ದರು. ಇತಿಹಾಸ ತಿಳಿದವರು ಈ ಬಗ್ಗೆ ಅಸಡ್ಡೆ ತೋರುವುದಿಲ್ಲ ಎಂದು ಪರೋಕ್ಷವಾಗಿ ವಿಮರ್ಶಕರನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿಯ ವಿರುದ್ಧ ವಾಗ್ದಾಳಿ:
ಸಮಕಾಲೀನ ರಾಜಕೀಯದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಯಾವಾಗಲೂ ರಾಜಕೀಯ ಲಾಭಕ್ಕಾಗಿ ಧರ್ಮದ ಹೆಸರನ್ನು ಬಳಸುತ್ತಿದೆ ಎಂದು ಆರೋಪಿಸಿದರು. “ಬಾನು ಮುಷ್ತಾಕ್ ಅವರು ಕನ್ನಡ ತಾಯಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆದರೆ, ಕನ್ನಡದ ಬಗ್ಗೆ ಗೌರವ ಇಲ್ಲದೆ ಯಾರಾದರೂ ಕನ್ನಡದಲ್ಲಿ ಸಾಹಿತ್ಯ ರಚಿಸಲು ಸಾಧ್ಯವೇ?” ಎಂದು ಪ್ರಶ್ನಿಸಿದರು. ಬಿಜೆಪಿಯವರು ಕೇವಲ ಕುಂಟು ನೆಪಗಳನ್ನು ಹುಡುಕುತ್ತಿದ್ದಾರೆ ಎಂದು ಟೀಕಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ದನದ ಮಾಂಸ ತಿನ್ನುವವರು ದಸರಾ ಉದ್ಘಾಟಿಸುವುದು ಸರಿಯಲ್ಲ ಎಂಬ ಹೇಳಿಕೆಯನ್ನು ತಳ್ಳಿಹಾಕಿದ ಮುಖ್ಯಮಂತ್ರಿ, “ಅದೆಲ್ಲಾ ಢೋಂಗಿಗಳ ಮಾತು. ಅವರ ಮಾತುಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣದ ಎಸ್ಐಟಿ ತನಿಖೆ:
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಧರ್ಮಯಾತ್ರೆ ಕುರಿತು ಮಾತನಾಡಿದ ಸಿದ್ದರಾಮಯ್ಯ, “ಬಿಜೆಪಿ ಧರ್ಮಸ್ಥಳ ಪ್ರಕರಣದ ಬಗ್ಗೆ ರಾಜಕೀಯ ಮಾಡುತ್ತಿದೆ. ಎಸ್ಐಟಿ ತನಿಖೆಯನ್ನು ಸ್ವತಃ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದ್ದಾರೆ. ಪ್ರಕರಣದ ಸತ್ಯಾಂಶ ಹೊರಬರಬೇಕು ಎಂಬ ಕಾರಣಕ್ಕೆ ಎಸ್ಐಟಿ ರಚಿಸಲಾಗಿದೆ. ಇಲ್ಲದಿದ್ದರೆ ಧರ್ಮಸ್ಥಳಕ್ಕೆ ಯಾವಾಗಲೂ ಒಂದು ಸಂಶಯ ಇರುತ್ತಿತ್ತು” ಎಂದು ಹೇಳಿದರು.
ಪ್ರಕರಣದ ಫಿರ್ಯಾದಿದಾರರು ನ್ಯಾಯಾಲಯದ ಮುಂದೆ 164 ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಹಿಂದೆ ಅನೇಕ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಕೂಡ ಎಸ್ಐಟಿ ತನಿಖೆಗೆ ಒತ್ತಾಯಿಸಿದ್ದರು. ಈಗ ರಾಜಕೀಯ ಕಾರಣಗಳಿಗಾಗಿ ವಿರೋಧಿಸುತ್ತಿದ್ದಾರೆ. ಅವರಿಗೆ ಧರ್ಮದ ಬಗ್ಗೆ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಆರೋಪಿಸಿದರು.