
ಉಡುಪಿ: ತನ್ನ ವಯಸ್ಸಾದ ತಾಯಿಯ ಆಸೆಯನ್ನು ಪೂರೈಸಲು ಹಳೆಯ ಸ್ಕೂಟರ್ನಲ್ಲಿ ದೇಶಾದ್ಯಂತ ಪರ್ಯಟನೆ ಮಾಡಿ ಗಮನ ಸೆಳೆದಿರುವ ಮೈಸೂರಿನ ಕೃಷ್ಣ ಕುಮಾರ್ ಹಾಗೂ ಅವರ ತಾಯಿ ಚೂಡಾರತ್ನಮ್ಮ ಅವರಿಗೆ ಉಡುಪಿಯಲ್ಲಿ ಭವ್ಯ ಗೌರವ ಸಮರ್ಪಿಸಲಾಗಿದೆ. ಪರ್ಯಾಯ ಶೀರೂರು ಶ್ರೀ ಕೃಷ್ಣ ಮಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ವೇದ ವರ್ಧನ ಶ್ರೀಪಾದರು ಈ ‘ಆಧುನಿಕ ಶ್ರವಣಕುಮಾರ’ನನ್ನು ಸನ್ಮಾನಿಸಿದರು.
ಕಾರ್ಪೊರೇಟ್ ಉದ್ಯೋಗವನ್ನು ತ್ಯಜಿಸಿ, ತಂದೆಯ ನೆನಪಿನ ಬಜಾಜ್ ಚೇತಕ್ ಸ್ಕೂಟರ್ನಲ್ಲಿ ತಾಯಿಯನ್ನು ಕೂರಿಸಿಕೊಂಡು ಲಕ್ಷಾಂತರ ಕಿಲೋಮೀಟರ್ ಸಂಚರಿಸುತ್ತಿರುವ ಕೃಷ್ಣ ಕುಮಾರ್ ಅವರ ಮಾತೃಭಕ್ತಿಯನ್ನು ಶ್ರೀಗಳು ಶ್ಲಾಘಿಸಿದರು. ಮೈಸೂರಿನ ಈ ತಾಯಿ-ಮಗ ಯಾರಿಂದಲೂ ಆರ್ಥಿಕ ನೆರವು ಪಡೆಯದೆ, ಸ್ವಂತ ಖರ್ಚಿನಲ್ಲಿಯೇ ಬದರಿನಾಥದವರೆಗೆ ಪಯಣ ಬೆಳೆಸಿರುವುದು ವಿಶೇಷ. ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿರುವ ಬಜಾಜ್ ಕಂಪನಿಯು 1.50 ಲಕ್ಷ ರೂಪಾಯಿ ಮೌಲ್ಯದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದೆ. ಅಲ್ಲದೆ, ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ನಾಡು-ನುಡಿ ಹಬ್ಬದಲ್ಲಿ ಇವರಿಗೆ ‘ಸಮಾಜ ಸೇವಾ ರತ್ನ’ ಹಾಗೂ ಬ್ರಾಹ್ಮಣ ಮಹಾಸಭಾದಿಂದ ‘ಬ್ರಹ್ಮತೇಜ’ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಗಿದೆ.





































