
ಬ್ರಿಟಿಷ್ ಆಳ್ವಿಕೆಯ ವಿರುದ್ಧ ಆಜಾದ್ ಹಿಂದ್ ಫೌಜ್ ಕಟ್ಟಿ ಸಿಂಹಸ್ವಪ್ನರಾಗಿದ್ದ ನೇತಾಜಿಯವರ ಹೋರಾಟದ ಹಾದಿ ಇಂದಿನ ಯುವ ಪೀಳಿಗೆಗೆ ಸದಾ ಪ್ರಸ್ತುತ ಎಂದು ಮುದ್ರಾಡಿ ಪ್ರೌಢಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಅಶೋಕ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು. ಮುದ್ರಾಡಿ ವೃತ್ತದಲ್ಲಿರುವ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ವ್ಯಕ್ತಿತ್ವದಲ್ಲಿ ಶಿಸ್ತು, ಧೈರ್ಯ ಮತ್ತು ದೇಶಪ್ರೇಮ ಮೈಗೂಡಿಸಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ಕೇಂದ್ರ ಸರ್ಕಾರವು ಇವರ ಜನ್ಮದಿನವನ್ನು ‘ಪರಾಕ್ರಮ್ ದಿವಸ್’ ಎಂದು ಘೋಷಿಸಿರುವುದು ಅವರ ಅಪ್ರತಿಮ ಸಾಹಸಕ್ಕೆ ಸಂದ ಗೌರವವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುದ್ರಾಡಿ ಮಹಾಗಣಪತಿ ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಅವರು ನೇತಾಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಮೆ ಸ್ಥಾಪಕರಾದ ಅಖಿಲ ಭಾರತೀಯ ನೇತಾಜಿ ಕ್ರಾಂತಿಕಾರಿ ಸಂಘದ (ಮುಂಬೈ) ಪ್ರಮುಖ ದಿವಾಕರ ಎನ್. ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಶುಭ ಕೋರಿದರು. ಎಂ.ಎನ್.ಡಿ.ಎಸ್.ಎಂ. ಪ್ರೌಢಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ವೇದಿಕೆಯಲ್ಲಿ ಮುದ್ರಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರಮ್ಯಾಕಾಂತಿ, ಸದಸ್ಯರಾದ ಗಣಪತಿ ಎಂ., ಉಪ್ಪಳ ಸಂತೋಷ ಕುಮಾರ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಸ್ವಾಗತಿಸಿ, ಮಹೇಶ ನಾಯ್ಕ ಕೆ. ಕಾರ್ಯಕ್ರಮ ನಿರ್ವಹಿಸಿದರು. ಪಿ. ವಿ. ಆನಂದ್ ವಂದನಾರ್ಪಣೆ ಮಾಡಿದರು. ಊರಿನ ಹಿರಿಯರು ಹಾಗೂ ವಿದ್ಯಾರ್ಥಿಗಳು ಈ ದೇಶಪ್ರೇಮದ ಸಮಾರಂಭಕ್ಕೆ ಸಾಕ್ಷಿಯಾದರು.













