
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂಬರುವ ಬಜೆಟ್ನಲ್ಲಿ ಉಡುಪಿ ಜಿಲ್ಲೆಯ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ವಿಶೇಷ ಅನುದಾನ ನೀಡುವಂತೆ ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ, ಹೊಸ ಜಿಲ್ಲಾ ಆಸ್ಪತ್ರೆಯ ಕಟ್ಟಡ ಕಾರ್ಯಾಚರಣೆಗೆ ಅಗತ್ಯವಿರುವ ₹48.36 ಕೋಟಿ ಹೆಚ್ಚುವರಿ ನಿಧಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ವಹಣೆಗೆ ನೆರವು, ಮೀನುಗಾರಿಕೆ ಅಭಿವೃದ್ಧಿಗಾಗಿ ಡೀಸೆಲ್ ಸಬ್ಸಿಡಿ ಹಾಗೂ ನಾಡ ದೋಣಿಗಳಿಗೆ ಸೀಮೆ ಎಣ್ಣೆ ಪೂರೈಕೆ, ಬಂದರು ಅಭಿವೃದ್ಧಿ ಹಾಗೂ ಸೀ ಆಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಶಾಸಕರು ಸಿಎಂ ಗಮನಕ್ಕೆ ತಂದಿದ್ದಾರೆ.
ನಾರಾಯಣ ಗುರು ಅಭಿವೃದ್ದಿ ನಿಗಮಕ್ಕೆ ₹500 ಕೋಟಿ ಅನುದಾನ ಮೀಸಲು ಮಾಡಬೇಕೆಂದು ಮನವಿ ಮಾಡಲಾಗಿದ್ದು, ಪ್ರಾಕೃತಿಕ ವಿಕೋಪ ಪರಿಹಾರಕ್ಕಾಗಿ ₹25 ಕೋಟಿ ನೆರವು ಹಾಗೂ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ₹5 ಲಕ್ಷದಷ್ಟು ಪರಿಹಾರ ನೀಡುವಂತೆ ಶಾಸಕರು ಒತ್ತಾಯಿಸಿದ್ದಾರೆ. ಕೃಷಿ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಕೃಷಿ ಕಾಲೇಜು ಸ್ಥಾಪನೆ, ಪ್ರವಾಸಿ ಬಂಗಲೆ ನಿರ್ಮಾಣ, ಸರಕಾರಿ ಬಸ್ ಸೇವೆ ಹೆಚ್ಚಳ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬುದು ಅವರ ಬೇಡಿಕೆಯಲ್ಲಿತ್ತು.
ಇದೇ ವೇಳೆ, ಉಡುಪಿ ನಗರದಲ್ಲಿ ಹೆಚ್ಚುವರಿಯಾಗಿ ಉಪ ವಿಭಾಗಾಧಿಕಾರಿ (SDO) ಕಚೇರಿಯನ್ನು ಮಂಜೂರು ಮಾಡುವಂತೆ, ಪರ್ಯಾಯ ಮಹೋತ್ಸವಕ್ಕೆ ₹25 ಕೋಟಿ ವಿಶೇಷ ಅನುದಾನ ನೀಡುವಂತೆ ಹಾಗೂ ಮಣ್ಣಪಳ್ಳ ಕೆರೆಯ ಅಭಿವೃದ್ಧಿಗೆ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಮರಳು ದಂಧೆ ನಿಯಂತ್ರಿಸಲು ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕೆಂದು ಅವರು ಸಿಎಂ ಗಮನಕ್ಕೆ ತಂದಿದ್ದಾರೆ.
ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಸಿಎಂ ಭರವಸೆ
ತುಳುನಾಡಿನ ಕಂಬಳ, ಯಕ್ಷಗಾನ, ನೇಮೋತ್ಸವ, ನಾಗಮಂಡಲ ಹಾಗೂ ದೈವಾರಾಧನೆಗಳಿಗೆ ಜಿಲ್ಲಾಡಳಿತ ಹೇರಿರುವ ಕಠಿಣ ನಿಯಮಾವಳಿಗಳಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಿಗೆ ಅಡೆತಡೆ ಉಂಟಾಗುತ್ತಿರುವುದಾಗಿ ಶಾಸಕರು ಸಿಎಂ ಗಮನಕ್ಕೆ ತಂದರು. ಈ ಬಗ್ಗೆ ಸ್ಪಂದಿಸಿದ ಸಿಎಂ, ಧಾರ್ಮಿಕ ಆಚರಣೆಗಳು ಸುಗಮವಾಗಿ ನಡೆಯುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಿದರು.