
ಉಡುಪಿ : ಉಡುಪಿ ಜಿಲ್ಲೆಯಲ್ಲಿ ನಡುರಾತ್ರಿ ನಡೆದ ಭೀಕರ ಘಟನೆಯಲ್ಲಿ ಮಲಗಿದ್ದ ಕೂಲಿ ಕಾರ್ಮಿಕನೊಬ್ಬನ ಮೇಲೆ ಕತ್ತಿಯಿಂದ ದುಷ್ಕರ್ಮಿಯೊಬ್ಬ ದಾಳಿ ನಡೆಸಿದ ಪ್ರಕರಣ ವರದಿಯಾಗಿದೆ. ಆದರೆ ಮಗಳ ಸಮಯೋಚಿತ ಎಚ್ಚರಿಕೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಗಾಯಗೊಂಡ ತಂದೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.
ಘಟನೆ ಆದಿ ಉಡುಪಿಯಲ್ಲಿರುವ ನಿವಾಸವೊಂದರಲ್ಲಿ ಶನಿವಾರ ರಾತ್ರಿ ನಡೆದಿದೆ. ಕರಬಸಪ್ಪ (43) ಎಂಬ ಕೂಲಿ ಕಾರ್ಮಿಕ ಮಗಳೊಂದಿಗೆ ಮನೆಯೊಳಗೆ ಮಲಗಿದ್ದ ವೇಳೆ, ಸ್ಥಳೀಯ ನಿವಾಸಿ ಕುಮಾರ್ ಎಂಬಾತ ಕತ್ತಿ ಹಿಡಿದು ಮನೆಯೊಳಗೆ ನುಗ್ಗಿ, ಮಲಗಿದ್ದ ಕರಬಸಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಮಗಳು ಬೊಬ್ಬೆ ಹಾಕಿದ ಶಬ್ದ ಕೇಳಿ ಸ್ಥಳೀಯರು ಧಾವಿಸಿದ್ದಾರೆ.
ಗಂಭೀರ ಗಾಯಗೊಂಡ ಕರಬಸಪ್ಪರವರನ್ನು ವಿಶು ಶೆಟ್ಟಿ ಅಂಬಲಪಾಡಿಯವರು ತಕ್ಷಣ ಸ್ಥಳಕ್ಕೆ ಧಾವಿಸಿ ತಮ್ಮ ವಾಹನದಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಲು ನೆರವಾಗಿದ್ದಾರೆ. ಬಳಿಕ ವೈದ್ಯರ ಸಲಹೆಯಂತೆ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳುಹಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿ ಕುಮಾರ್ನನ್ನು ಬಂಧಿಸಿ, ಹಲ್ಲೆಗೆ ಬಳಸಿದ್ದ ಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.