
ಉಡುಪಿ : ಬನ್ನಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಹತ್ತು ದಿನಗಳಿಂದ ಅಲೆಯುತ್ತಿದ್ದ, ಮಾನಸಿಕ ಅಸ್ವಸ್ಥತೆ ಹೊಂದಿದ ಅನುಮಾನಾಸ್ಪದ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ಅವರು ಮಾನವೀಯತೆ ಮೆರೆದು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕಲ್ಪಿಸಿದ್ದರು. ಸಂಬಂಧಿಕರ ಪತ್ತೆಯಾಗದ ಕಾರಣ, ಇದೀಗ ಆ ಮಹಿಳೆಯನ್ನು ನಿಟ್ಟೂರಿನ ಮಹಿಳಾ ನಿಲಯದಲ್ಲಿ ಸೇರ್ಪಡೆ ಮಾಡಲಾಗಿದೆ.
ಸುಮಾರು 40 ವರ್ಷ ಪ್ರಾಯದ ಈ ಮಹಿಳೆ ಮರಾಠಿ ಭಾಷೆ ಮಾತನಾಡುತ್ತಿದ್ದಾರೆ. ಮಹಾರಾಷ್ಟ್ರ ಮೂಲದವರಾಗಿರುವ ಶಂಕೆಯಿದೆ. ಚಿಕಿತ್ಸೆ ನಂತರ ಮಾನಸಿಕ ಸ್ಥಿತಿ ಸುಧಾರಿಸಿ ಸಹಜವಾಗಿ ಮಾತನಾಡುತ್ತಿದ್ದ ಮಹಿಳೆಯನ್ನು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮಹಿಳಾ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.
ವೈದ್ಯಕೀಯ ವೆಚ್ಚವನ್ನು ಕರುಣಾಕರ್ ಕೋಟ ಹಾಗೂ ಅಂಬಲಪಾಡಿಯ ಇತರ ಹಿತೈಷಿಗಳು ಭರಿಸಿದ್ದರೆಂದು ತಿಳಿದುಬಂದಿದೆ. ಸಂಬಂಧಿಕರು ಅಥವಾ ಯಾರಾದರೂ ಮಹಿಳೆಯನ್ನು ಗುರುತಿಸಿದಲ್ಲಿ, ಉಡುಪಿ ಮಹಿಳಾ ನಿಲಯ ಅಥವಾ ನಗರ ಠಾಣೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.
ಈ ಮಾನವೀಯ ಕಾರ್ಯದಲ್ಲಿ ಸಖಿ ಕೇಂದ್ರದ ಸಿಬ್ಬಂದಿ ಮತ್ತು ಉಡುಪಿ ನಗರ ಠಾಣೆ ಪೊಲೀಸರು ಕಾನೂನು ಪ್ರಕ್ರಿಯೆಯಲ್ಲಿ ಸಹಕಾರ ನೀಡಿದ್ದಾರೆ.