
ಉಡುಪಿ : ಭಾರಿ ಮಳೆಯ ನಡುವೆ ಉಡುಪಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ಹೊರರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಚಿಕಿತ್ಸೆ ಕೊಡಿಸಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ್ದರು. ಇದೀಗ ಆ ಮಹಿಳೆಯ ಸಂಬಂಧಿಕರು ಪತ್ತೆಯಾಗಿದ್ದು, ಅವರನ್ನು ಸುರಕ್ಷಿತವಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ರಕ್ಷಣೆಗೊಳಗಾದ ಮಹಿಳೆಯನ್ನು 40 ವರ್ಷ ವಯಸ್ಸಿನ ವೈಶಾಲಿ ಎಂದು ಗುರುತಿಸಲಾಗಿದೆ. ರಾತ್ರಿಯಿಂದ ಬೆಳಗಿನ ಜಾವದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೊಂದಲಮಯವಾಗಿ ಅಡ್ಡಾಡುತ್ತಿದ್ದ ವೈಶಾಲಿಯನ್ನು ರಕ್ಷಿಸಲು ವಿಶುಶೆಟ್ಟಿ ಅವರು ನಗರ ಠಾಣಾ ಪೊಲೀಸರ ಸಹಾಯದಿಂದ ಸಾಕಷ್ಟು ಶ್ರಮಿಸಬೇಕಾಯಿತು.
ರಕ್ಷಣೆಯ ಬಳಿಕ, ವೈಶಾಲಿಯನ್ನು ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಯಿತು. ಚಿಕಿತ್ಸೆಯ ನಂತರ ಮಹಿಳೆ ಶಾಂತವಾಗಿ ಸುಧಾರಣೆ ಕಾಣಲಾರಂಭಿಸಿದರು. ಸಂಬಂಧಿಕರು ಪತ್ತೆಯಾಗದ ಕಾರಣ, ವಿಶುಶೆಟ್ಟಿ ಅವರು ಚಿಕಿತ್ಸೆಯ ಬಳಿಕ ಅವರನ್ನು ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ್ದರು. ನಿಲಯದ ಮುಖ್ಯಾಧಿಕಾರಿ ಶ್ರೀಮತಿ ಪುಷ್ಪರಾಣಿಯವರು ಮಹಿಳೆಯ ವಿಶ್ವಾಸ ಗಳಿಸಿ, ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ ಸಂಬಂಧಿಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು. ಔರಂಗಾಬಾದ್ ಮೂಲದ ವೈಶಾಲಿ, ಮನೋರೋಗದಿಂದ ಬಳಲಿ ಉಡುಪಿಗೆ ಬಂದಿದ್ದರು ಮತ್ತು ಅವರ ಕಾಣೆಯಾದ ಬಗ್ಗೆ ಔರಂಗಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
“ಬೇರೆ ಬೇರೆ ಕಾರಣಗಳಿಂದ ಮನೋರೋಗಿಗಳಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಜನರು ಬರುತ್ತಾರೆ. ಯಾರನ್ನೂ ನಿರ್ಲಕ್ಷಿಸಬಾರದು. ಸಾಧ್ಯವಾದರೆ ರಕ್ಷಿಸುವ ಕೆಲಸ ಮಾಡಿದರೆ ಎಷ್ಟೋ ಜನ ತಮ್ಮ ಕುಟುಂಬವನ್ನು ಸೇರಿರುವ ಉದಾಹರಣೆಗಳು ಬಹಳಷ್ಟಿವೆ. ಈ ಪ್ರಕರಣದಲ್ಲೂ ಕೂಡ ಮಹಿಳೆಯನ್ನು ಬಹಳ ಹರಸಾಹಸಪಟ್ಟು ರಕ್ಷಣೆ ಮಾಡಿದ್ದು, ಚಿಕಿತ್ಸೆ ಕೊಡಿಸಿದ ಬಳಿಕ ರಾಜ್ಯ ಮಹಿಳಾ ನಿಲಯದಿಂದ ಹಸ್ತಾಂತರವಾಗಿರುವುದು ಒಂದು ಉದಾಹರಣೆ. ಮಹಿಳೆಯನ್ನು ಹಸ್ತಾಂತರಿಸುವಲ್ಲಿ ಯಶಸ್ವಿಯಾದ ರಾಜ್ಯ ಮಹಿಳಾ ನಿಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳು,” ಎಂದು ವಿಶುಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.