
ಕಡಲೂರು (ತಮಿಳುನಾಡು): ತಂದೆಯ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ, ತಂದೆಯ ಶವದ ಮುಂದೆ ತಾನೆ ಪ್ರೀತಿಸಿದ್ದ ಯುವತಿಗೆ ತಾಳಿ ಕಟ್ಟಿದ ಅಪರೂಪದ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
ಕವನ ಗ್ರಾಮ ನಿವಾಸಿ ಹಾಗೂ ರೈಲ್ವೆ ಇಲಾಖೆಯಿಂದ ನಿವೃತ್ತರಾಗಿದ್ದ ಸೆಲ್ವರಾಜ್ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದರು. ಅವರ ಮಗ ಅಪ್ಪು, ವಿರುದಾಚಲಂ ಕೌಂಜಿಯಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿದ್ದು, ವಿಜಯಶಾಂತಿ ಎಂಬ ಸಹಪಾಠಿಯನ್ನು ಪ್ರೀತಿಸುತ್ತಿದ್ದ.
ಇಬ್ಬರೂ ಮುಂದೆ ಸ್ಥಿರ ಜೀವನ ಕಟ್ಟಿಕೊಂಡ ಬಳಿಕ ಮದುವೆಯಾಗೋ ನಿರ್ಧಾರದಲ್ಲಿದ್ದರು. ಅಷ್ಟರಲ್ಲಿ ತಂದೆ ಸೆಲ್ವರಾಜ್ ಮೃತ ಪಟ್ಟಿದ್ದರು. ಆದರೆ ತಂದೆಯ ಮೃತದೇಹದ ಮುಂದೆ ಅವರ ಆಶೀರ್ವಾದವನ್ನು ಪಡೆಯಬೇಕೆಂಬ ಉದ್ದೇಶದಿಂದ, ಅಪ್ಪು ವಿಜಯಶಾಂತಿಯ ಒಪ್ಪಿಗೆಯೊಂದಿಗೆ ಸ್ಥಳದಲ್ಲಿಯೇ ಮದುವೆಯಾಗಿದ. ಈ ಘಟನೆ ಸಂದರ್ಭ, ಅಪ್ಪು ಅವರ ತಾಯಿ, ಸಂಬಂಧಿಕರು ಹಾಗೂ ಗ್ರಾಮಸ್ಥರು ಚಿಂತೆಮಿಶ್ರಿತ ಮನಸ್ಥಿತಿಯಲ್ಲಿದ್ದರೂ ಶಾಂತಿ ಕಾಯ್ದುಕೊಂಡಿದ್ದರು.
ಮದುವೆಗೆ ಹುಡುಗಿಯ ಪರಿವಾರದಿಂದ ಯಾರೂ ಹಾಜರಾಗಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.