
ಉಡುಪಿ: ಮಣಿಪಾಲದಲ್ಲಿ ಅಪ್ರಾಪ್ತ ಬಾಲಕಿಯ ಜೊತೆ ಯುವಕನೋರ್ವ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದ್ದು, ಆತನ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಾಗಿದೆ.
ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಕಟಪಾಡಿಯ ಬಿಜೆಪಿ ಮುಖಂಡನ ಪುತ್ರನಾದ ಶ್ರೀಶಾಂತ್ ಪೂಜಾರಿ (20) ಎಂಬಾತನೇ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ.
ಕಟಪಾಡಿ ಮಣಿಪುರದ ನಿವಾಸಿಯಾಗಿರುವ ಶ್ರೀಶಾಂತ್, ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಣಿಪಾಲದ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಬಾಲಕಿಯ ಪೋಷಕರಿಗೆ ಈ ಮಾಹಿತಿ ತಿಳಿಯುತ್ತಿದ್ದಂತೆ, ಅವರು ನೇರವಾಗಿ ಪೊಲೀಸರೊಂದಿಗೆ ಲಾಡ್ಜ್ಗೆ ದಾಳಿ ನಡೆಸಿದ್ದಾರೆ.
ನಕಲಿ ಆಧಾರ್, ಎರಡು ದೂರುಗಳು
ಆರೋಪಿ ಶ್ರೀಶಾಂತ್, ಬಾಲಕಿಯನ್ನು ಲಾಡ್ಜ್ಗೆ ಕರೆದುಕೊಂಡು ಹೋಗಲು ನಕಲಿ ಆಧಾರ್ ಕಾರ್ಡ್ ಬಳಸಿದ್ದ ಎಂದು ತಿಳಿದುಬಂದಿದೆ. ಈ ಕೃತ್ಯದ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಈ ಪ್ರಕರಣದ ಮಾಹಿತಿ ತಿಳಿದ ಇನ್ನೋರ್ವ ಬಾಲಕಿ ಸಹ ಶ್ರೀಶಾಂತ್ ವಿರುದ್ಧ ದೂರು ದಾಖಲಿಸಿದ್ದಾಳೆ. “ನನಗೂ ಶ್ರೀಶಾಂತ್ ಮದುವೆ ಆಗುವುದಾಗಿ ನಂಬಿಸಿ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದನು” ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಪೋಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



































