
ಮಂಗಳೂರು: ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಯನ್ನು ತೀವ್ರಗೊಳಿಸಿದೆ. ತನಿಖೆಯ ಭಾಗವಾಗಿ ಮಂಗಳವಾರ, ಎಸ್ಐಟಿ ಅಧಿಕಾರಿಗಳು ಉಜಿರೆ ಸಮೀಪದ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಮಹಜರು ನಡೆಸಿದ್ದಾರೆ. ಈ ಕಾರ್ಯಚರಣೆಯಲ್ಲಿ ವಿಧಿ ವಿಜ್ಞಾನ ತಜ್ಞರು ಮತ್ತು ಸಾಕ್ಷಿದಾರರು ಕೂಡ ಎಸ್ಐಟಿ ಜೊತೆಗಿದ್ದರು.
ಬೆಳಿಗ್ಗೆ ಸುಮಾರು 9 ಗಂಟೆಗೆ ತಿಮರೋಡಿ ಅವರ ಮನೆಗೆ ತೆರಳಿದ ಎಸ್ಐಟಿ ತಂಡವು, ರಾತ್ರಿಯವರೆಗೂ ಸಾಕ್ಷಿದಾರನನ್ನು ವಿಚಾರಣೆ ನಡೆಸಿದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಸಾಕ್ಷಿದಾರನು ಕೆಲ ಕಾಲ ತಂಗಿದ್ದಾಗ ನಡೆದ ಘಟನೆಗಳ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತಂತೆ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಮೃತದೇಹಗಳನ್ನು ಹೂಳಿದ ಪ್ರಕರಣದಲ್ಲಿ ಸಾಕ್ಷಿದಾರನು ಹಲವರ ಹೆಸರುಗಳನ್ನು ಹೇಳಿಕೊಂಡಿದ್ದಾನೆ. ಪ್ರಬಲ ಪುರಾವೆಗಳು ಲಭಿಸಿದರೆ, ಅವರನ್ನು ವಿಚಾರಣೆಗೊಳಪಡಿಸಲು ಎಸ್ಐಟಿ ಮುಂದಾಗಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಭೇಟಿ ನೀಡಿದಾಗ ಮಹೇಶ್ ಶೆಟ್ಟಿ ಮನೆಯಲ್ಲಿ ಇರಲಿಲ್ಲ. ಆದರೆ, ಅವರ ಕುಟುಂಬದ ಇತರ ಸದಸ್ಯರಿಂದ ಹೇಳಿಕೆಗಳನ್ನು ಪಡೆಯಲಾಗಿದೆ. ಈ ಕಾರ್ಯಚರಣೆಯ ಸಂದರ್ಭದಲ್ಲಿ ಮನೆಯ ಸುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಮಾಧ್ಯಮ ಪ್ರತಿನಿಧಿಗಳನ್ನು ಮನೆಯಿಂದ 500 ಮೀಟರ್ ದೂರದಲ್ಲೇ ತಡೆಯಲಾಗಿತ್ತು.
ಈ ನಡುವೆ, ಧರ್ಮಸ್ಥಳ ಪ್ರಕರಣದಲ್ಲಿ ಮಹತ್ವದ ಹೇಳಿಕೆಗಳನ್ನು ನೀಡಿದ್ದ ಸಾಕ್ಷಿದಾರ, ತನ್ನನ್ನು 1994ರಿಂದ 2014ರ ಅವಧಿಯಲ್ಲಿ ಮೃತದೇಹಗಳನ್ನು ಹೂಳಲು ಹೇಗೆ ಬಳಸಿಕೊಳ್ಳಲಾಗಿತ್ತು ಎಂಬ ವಿವರಗಳನ್ನು ಕೆಲವು ಯೂಟ್ಯೂಬ್ ಚಾನೆಲ್ಗಳ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು. ಅನಾಥ ಮೃತದೇಹಗಳನ್ನು ಹೂಳಲು ಸೂಚನೆ ನೀಡುತ್ತಿದ್ದವರ ಬಗ್ಗೆಯೂ ಮಾಹಿತಿ ನೀಡಿದ್ದರು.
ಜೈನ ಧರ್ಮದ ಅವಹೇಳನ ದೂರು: ಈ ಪ್ರಕರಣದ ಮಧ್ಯೆ, ‘ಕುಡ್ಲ ರಾಂಪೇಜ್’ ಎಂಬ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಜೈನ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಗಿರೀಶ್ ಮಟ್ಟಣ್ಣವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಧಾರವಾಡ ಗ್ರಾಮಾಂತರ ಠಾಣೆಗೆ ಮೊದಲು ನೀಡಲಾಗಿದ್ದ ಈ ದೂರು ಬೆಳ್ತಂಗಡಿ ಠಾಣೆಗೆ ವರ್ಗಾವಣೆಯಾಗಿದೆ.
ಸುಜಾತಾ ಭಟ್ ಎಸ್ಐಟಿ ಎದುರು ಹಾಜರು: ಮಗಳು ಅನನ್ಯಾ ಭಟ್ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದ ಸುಜಾತಾ ಭಟ್ ಅವರು ಕೂಡ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಅವರು ಇಡೀ ದಿನ ಎಸ್ಐಟಿ ಕಚೇರಿಯಲ್ಲಿ ಇದ್ದು, ಮಗಳ ನಾಪತ್ತೆಗೆ ಸಂಬಂಧಿಸಿದಂತೆ ನೀಡಿದ ದೂರಿನ ಬಗ್ಗೆ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.