
ಮಂಗಳೂರು, ಮೇ 3:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಮಾಹಿತಿಯೊಂದು ಬೆಳಕಿಗೆ ಬಂದಿದ್ದು , ಈ ಹತ್ಯೆ ಪೂರ್ವನಿಯೋಜಿತ ಕಾನ್ಟ್ರಾಕ್ಟ್ ಕಿಲ್ಲಿಂಗ್ ಆಗಿರುವುದೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.
ಬಂಧಿತರು: ಖಲಂದರ್ ಶಾಫಿ, ಅಬ್ದುಲ್ ಸಫ್ವಾನ್, ನಿಯಾಜ್, ಮಹಮ್ಮದ್ ಮುಜಾಮಿಲ್, ರಂಜಿತ್, ಆದಿಲ್ ಮೆಹ್ರೂಪ್, ರಿಜ್ವಾನ್ ಮತ್ತು ನಾಗರಾಜ್.
ಹತ್ಯೆಗೆ ಹಿಂದಿನ ಕಾರಣ:
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದಂತೆ, 2023ರಲ್ಲಿ ಸುಹಾಸ್ ಶೆಟ್ಟಿ ಮತ್ತು ಸಫ್ವಾನ್ ನಡುವೆ ಘರ್ಷಣೆ ಉಂಟಾಗಿದ್ದು, ಸುಹಾಸ್ ಅವರಿಂದ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಈ ಹಲ್ಲೆಯ ನಂತರ ಸುಹಾಸ್ ನಿಂದ ಆತಂಕಗೊಂಡ ಸಫ್ವಾನ್, ಫಾಜಿಲ್ ನ ತಮ್ಮ ಆದಿಲ್ ಮೆಹ್ರೂಪ್ ನನ್ನು ಸಂಪರ್ಕಿಸಿ, ಸುಹಾಸ್ ನ ಹತ್ಯೆಗೆ ಪ್ಲಾನ್ ರೂಪಿಸುತ್ತಾನೆ.
ಕೊಲೆಗಾಗಿ 5 ಲಕ್ಷ ರೂ. :
ಹತ್ಯೆ ಕಾರ್ಯಕ್ಕೆ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಸಫ್ವಾನ್ ನೀಡಿದ್ದು, ಇದನ್ನು ತಂಡದೊಳಗೆ ಹಂಚಲಾಗುತ್ತದೆ. ಚಿಕ್ಕಮಗಳೂರಿನ ನಿಯಾಜ್ ನ ಮೂಲಕ ಆತನ ಸ್ನೇಹಿತರು ರಂಜಿತ್ ಮತ್ತು ನಾಗರಾಜ್ ನನ್ನು ಸಂಪರ್ಕಿಸಿ, ಸುಹಾಸ್ ನ ಚಲನವಲನಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತದೆ.
ಹತ್ಯೆಗೆ ಪೂರ್ವಸಿದ್ಧತೆ:
ಕೊಲೆಗೂ ಮುನ್ನ, ಆರೋಪಿಗಳು ಸಫ್ವಾನ್ ನ ಮನೆಯಲ್ಲೇ ಎರಡು ದಿನ ವಾಸವಿದ್ದು, ಸುಹಾಸ್ ಶೆಟ್ಟಿಯ ಸಂಚಾರದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಾರೆ. ನಂತರ ನಿರ್ಧಿಷ್ಟ ದಿನದಂದು ಪೂರ್ವಸಿದ್ಧತೆಯಂತೆ ಕೊಲೆ ಮಾಡಲಾಗುತ್ತದೆ.
ಬುರ್ಖಾ ಧರಿಸಿದ ಮಹಿಳೆ – ಮತ್ತೊಂದು ಸುಳಿವು:
ಘಟನೆ ದಿನವು ಸ್ಥಳದಲ್ಲಿದ್ದ ಬುರ್ಖಾಧಾರಿ ಮಹಿಳೆ ನಿಯಾಜ್ ಗೆ ಸಂಬಂಧಿಸಿದವಳಾಗಿರಬಹುದು ಎಂಬ ಮಾಹಿತಿ ಲಭಿಸಿದ್ದು, ಈ ಬಗ್ಗೆ ತನಿಖೆ ಇನ್ನಷ್ಟು ಗಂಭೀರವಾಗಿ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಮುಂದಿನ ಕ್ರಮ:
ಪೊಲೀಸರು ಈಗಾಗಲೇ ಸಾಕಷ್ಟು ನಿರ್ಧಾರಾತ್ಮಕ ಸುಳಿವುಗಳನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇವೆ. ಪ್ರಕರಣದ ಹಿಂದೆ ಯಾವುದಾದರೂ ಸಂಘಟಿತ ಚಟುವಟಿಕೆ ಅಥವಾ ಆರ್ಥಿಕ, ರಾಜಕೀಯ ಉದ್ದೇಶಗಳಿವೆಯೇ ಎಂಬುದರ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.