
ಮಂಗಳೂರು : ಕರಾವಳಿಯ ಹೆಬ್ಬಾಗಿಲು ಮಂಗಳೂರು ಸಾರಿಗೆ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆಗೆ ಸಾಕ್ಷಿಯಾಗುತ್ತಿದೆ. 1, 2 ದಶಕಗಳ ಹಿಂದೆ ಖಾಸಗಿ ಬಸ್ ಸಾರಿಗೆಯಲ್ಲಿ ಮೈಲಿಗಲ್ಲು ಸ್ಥಾಪಿಸಿದ್ದ ಕುಡ್ಲದಲ್ಲಿ ಈಗ ‘ಹಸಿರು ಸಾರಿಗೆ’ (Green Transport) ಯುಗ ಆರಂಭವಾಗಲು ವೇದಿಕೆ ಸಿದ್ಧಗೊಂಡಿದೆ.
ಸಾರಿಗೆ ಇತಿಹಾಸದಲ್ಲಿ 1914ರಲ್ಲಿ ಮೊದಲ ಖಾಸಗಿ ಬಸ್ ಸೇವೆ ಆರಂಭಿಸಿದ್ದ ಮಂಗಳೂರು, ಈಗ ತನ್ನ ಮೊದಲ ಖಾಸಗಿ ಎಲೆಕ್ಟ್ರಿಕ್ ಬಸ್ (EV Bus) ಅನ್ನು ರಸ್ತೆಗೆ ಇಳಿಸಲು ಸಜ್ಜಾಗಿದೆ. ನಗರದ ಪ್ರಸಿದ್ಧ ಸಾರಿಗೆ ಉದ್ಯಮಿ ದಿಲ್ರಾಜ್ ಆಳ್ವ ಅವರ ಮಾಲೀಕತ್ವದ ‘ಗಣೇಶ್ ಪ್ರಸಾದ್’ ಬಸ್ ಸಂಸ್ಥೆಯು ಈ ಐತಿಹಾಸಿಕ ಬದಲಾವಣೆಗೆ ನಾಂದಿ ಹಾಡಿದೆ. ನಗರದ ರೂಟ್ ನಂ. 27 ರಲ್ಲಿ ಈ ಅತ್ಯಾಧುನಿಕ ಇವಿ ಬಸ್ ಶೀಘ್ರವೇ ಸಂಚಾರ ಆರಂಭಿಸಲಿದೆ.
ಈ ಇ-ಬಸ್ 9 ಮೀಟರ್ ಉದ್ದವಿದ್ದು, ಸುಮಾರು 32 ರಿಂದ 41 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಈ ಬಸ್ 200 ಕಿಲೋಮೀಟರ್ಗಳವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ, ಕೇವಲ 2 ಗಂಟೆಗಳಲ್ಲಿ ಇದರ ಬ್ಯಾಟರಿಯನ್ನು ಸಂಪೂರ್ಣವಾಗಿ ರೀಚಾರ್ಜ್ ಮಾಡಬಹುದಾಗಿದೆ. ಸುಸಜ್ಜಿತ ಹವಾನಿಯಂತ್ರಿತ (AC) ವ್ಯವಸ್ಥೆ ಮತ್ತು ಪುಣೆಯಲ್ಲಿ ವಿನ್ಯಾಸಗೊಳಿಸಲಾದ ಆಕರ್ಷಕ ಬಾಡಿ ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿದೆ.
ಸರ್ಕಾರಿ ಇ-ಬಸ್ಗಳ ಆಗಮನ: ಕೇವಲ ಖಾಸಗಿ ಮಾತ್ರವಲ್ಲದೆ, ‘ಪಿಎಂ ಇ-ಬಸ್ ಸೇವಾ’ ಯೋಜನೆಯಡಿ ಕೆಎಸ್ಸಾರ್ಟಿಸಿ (KSRTC) ಕೂಡ ಮಂಗಳೂರಿಗೆ 100 ಇಲೆಕ್ಟ್ರಿಕ್ ಬಸ್ಗಳನ್ನು ಮಂಜೂರು ಮಾಡಿದೆ. ಕುಂಟಿಕಾನ ಡಿಪೋ ಹಾಗೂ ಬಿಜೈ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್ಗಳ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಮುಂದಿನ 6 ತಿಂಗಳೊಳಗೆ ಸರ್ಕಾರಿ ಇ-ಬಸ್ಗಳೂ ರಸ್ತೆಗಿಳಿಯಲಿವೆ. ಈ ಹಸಿರು ಸಾರಿಗೆಯಿಂದ ನಗರದ ವಾಯು ಮಾಲಿನ್ಯ ಗಣನೀಯವಾಗಿ ತಗ್ಗುವ ನಿರೀಕ್ಷೆಯಿದೆ.



































