
ಸೋಮವಾರದಂದು ನವ್ಯಾ ತನ್ನ ಸ್ನೇಹಿತೆಯೊಂದಿಗೆ ಸ್ಕೂಟರ್ನಲ್ಲಿ ಸಂಚರಿಸುತ್ತಿದ್ದಾಗ, ಗುರುಪುರ ಸೇತುವೆಯ ಮೇಲೆ ವಾಹನವನ್ನು ನಿಲ್ಲಿಸುವಂತೆ ಹೇಳಿದ್ದಾಳೆ. ಗಾಡಿ ನಿಲ್ಲುತ್ತಿದ್ದಂತೆಯೇ ಯಾವುದೇ ಮುನ್ಸೂಚನೆ ನೀಡದೆ ಕ್ಷಣಾರ್ಧದಲ್ಲಿ ನದಿಗೆ ಜಿಗಿದಿದ್ದಾಳೆ. ಈ ವೇಳೆ ಜೊತೆಯಲ್ಲಿದ್ದ ಸ್ನೇಹಿತೆ ಆಕೆಯನ್ನು ತಡೆಯಲು ಪ್ರಯತ್ನಿಸಿ ಕೈ ಹಿಡಿದು ಎಳೆದರೂ ಪ್ರಯೋಜನವಾಗಲಿಲ್ಲ. ನವ್ಯಾ ನದಿಯ ನೀರಿನಲ್ಲಿ ಮುಳುಗಿ ಹೋಗಿದ್ದಾಳೆ. ತಕ್ಷಣವೇ ಸ್ಥಳೀಯರು ಬಜ್ಪೆ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡವು ಕಾರ್ಯಾಚರಣೆ ನಡೆಸಿ ಯುವತಿಯ ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ.
ಪ್ರೇಮ ವಂಚನೆಯ ಶಂಕೆ: ಪ್ರಾಥಮಿಕ ಮಾಹಿತಿಯ ಪ್ರಕಾರ, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಈ ಯುವತಿ ಕಳೆದ ಕೆಲವು ಸಮಯದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಆತ ಮದುವೆಯಾಗುವುದಾಗಿ ನಂಬಿಸಿ ಈಗ ವಂಚಿಸಿರುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿರಬಹುದು ಎಂದು ಶಂಕಿಸಲಾಗಿದೆ. ನವ್ಯಾ ಸಾವಿಗೂ ಮುನ್ನ ತನ್ನ ಪ್ರಿಯತಮನನ್ನು ಭೇಟಿಯಾಗಲು ಯತ್ನಿಸಿ ಆತನಿಗೆ ಕರೆ ಮಾಡಿದ್ದಳು ಮತ್ತು ಡೆತ್ ನೋಟ್ ಕೂಡ ಬರೆದಿಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



































