
ಉಡುಪಿ : ಜಿಲ್ಲೆಯ ಪ್ರಸಿದ್ಧ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಪ್ರಕ್ರಿಯೆ ನಡೆಸುವ ವಿಚಾರವಾಗಿ ಭೀಕರ ಸಂಘರ್ಷ ನಡೆದಿದ್ದು, ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗುರುವಾರ ಜರುಗಿದೆ. ಈ ಘಟನೆ ಬಂದರು ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿತ್ತು.
ಮಲ್ಪೆ ಬಂದರಿನಲ್ಲಿ ಮೀನು ಏಲಂ ಕೆಲಸ ಮಾಡುತ್ತಿದ್ದ ಅಂಬಲಪಾಡಿ ನಿವಾಸಿ ಶೇಕ್ ಅಯ್ಯುಬ್ (52) ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ. ಮೂಲಗಳ ಪ್ರಕಾರ, ಗುರುವಾರ ಬೆಳಿಗ್ಗೆ ಬಾಲಕನೊಬ್ಬ ತಂದಿದ್ದ ಮೀನಿನ ಏಲಂ ಪ್ರಕ್ರಿಯೆಯಲ್ಲಿ ಶೇಕ್ ಅಯ್ಯುಬ್ ತೊಡಗಿದ್ದಾಗ, ಅಲ್ಲಿಗೆ ಬಂದ ಮಿಥುನ್ ಕರ್ಕೇರಾ ಎಂಬ ವ್ಯಕ್ತಿ ವಿನಾಕಾರಣ ಜಗಳ ತೆಗೆದಿದ್ದಾನೆ. “ನೀನು ಯಾಕೆ ಮೀನು ತಂದಿ? ಏಲಂ ಮಾಡಲು ನಿನಗೆ ಯಾರು ಅಧಿಕಾರ ನೀಡಿದ್ದು?” ಎಂದು ಪ್ರಶ್ನಿಸಿ ಅಯ್ಯುಬ್ ಅವರ ಮುಖ, ಕಣ್ಣು, ಹೊಟ್ಟೆ ಮತ್ತು ತಲೆಗೆ ಮನಬಂದಂತೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಗಾಯಾಳುವನ್ನು ತಕ್ಷಣವೇ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಮಿಥುನ್ ಹಲ್ಲೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.



































