
ಬೆಂಗಳೂರು: ನಗರದ ಬಾಗಲೂರು ಅಪಾರ್ಟ್ಮೆಂಟ್ನಲ್ಲಿ, ಮನೆಯ ಯಜಮಾನಿ ರಾಶಿ ಪೂಜಾರಿ ಅವರು ಅತ್ಯಂತ ಮುದ್ದಿನಿಂದ ಸಾಕಿದ್ದ ‘ಗೂಫಿ’ ಹೆಸರಿನ ಶ್ವಾನದ ಕೊಲೆ ನಡೆದಿದೆ. ಈ ಅಮಾನವೀಯ ಕೃತ್ಯವನ್ನು ನಾಯಿ ನೋಡಿಕೊಳ್ಳಲು ನೇಮಿಸಲಾಗಿದ್ದ ಪುಷ್ಪಲತಾ ಎಂಬ ಮಹಿಳೆಯೇ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದಾರುಣ ದೃಶ್ಯ
ಕಳೆದ ಅಕ್ಟೋಬರ್ 31 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಾಕಿಂಗ್ಗೆ ಕರೆದುಕೊಂಡು ಹೋಗುವ ನೆಪದಲ್ಲಿ ಪುಷ್ಪಲತಾ ಅವರು ಗೂಫಿಯನ್ನು ಲಿಫ್ಟ್ಗೆ ಕರೆತಂದಿದ್ದಾರೆ. ಅಲ್ಲಿಯೇ ಆಕೆ ನಾಯಿಯನ್ನು ಹಿಡಿದು ನೆಲಕ್ಕೆ ಬಲವಾಗಿ ಬಡಿದು ಹತ್ಯೆ ಮಾಡಿದ್ದಾರೆ. ಈ ಕ್ರೂರ ಘಟನೆಯ ಸಂಪೂರ್ಣ ದೃಶ್ಯಾವಳಿ ಲಿಫ್ಟ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಪೊಲೀಸರ ವಶಕ್ಕೆ ಆರೋಪಿ ಮಹಿಳೆ
ಶ್ವಾನದ ಅಕಾಲಿಕ ಸಾವಿನ ಬಗ್ಗೆ ಮಾಲೀಕರಿಗೆ ಅನುಮಾನ ಮೂಡಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪುಷ್ಪಲತಾ ಅವರ ನಿಜ ಬಣ್ಣ ಬಯಲಾಗಿದೆ. ತಾನು ನಾಯಿಯನ್ನು ಕೊಲ್ಲಲಿಲ್ಲ, ಅದು ಇದ್ದಕ್ಕಿದ್ದಂತೆ ಸಾವನ್ನಪ್ಪಿತು ಎಂದು ಆಕೆ ಸುಳ್ಳು ಹೇಳಿದ್ದಳು. ಈ ಸಂಬಂಧ ಶ್ವಾನದ ಮಾಲೀಕರಾದ ರಾಶಿ ಪೂಜಾರಿ ಅವರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪುಷ್ಪಲತಾ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ (Prevention of Cruelty to Animals Act) ಪ್ರಕರಣ ದಾಖಲಿಸಿಕೊಂಡು, ಆರೋಪಿ ಮಹಿಳೆ ಪುಷ್ಪಲತಾರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಪ್ರಾಣಿಪ್ರಿಯರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.



































