
ಬೈಲೂರು: ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಜಾರು ಗ್ರಾಮದ ಮಡಿಬೆಟ್ಟಿನಲ್ಲಿ ಹೊಸ ಆರೋಗ್ಯ ಉಪಕೇಂದ್ರ ಶಿಲಾನ್ಯಾಸ, ಬೈಲೂರು ಪಳ್ಳಿ ಕ್ರಾಸ್ ಬಳಿ ಪಶು ಆಸ್ಪತ್ರೆಗೆ ಗುದ್ದಲಿ ಪೂಜೆ ಹಾಗೂ ಪಂಚಾಯತ್ ಉಪಕೇಂದ್ರ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಸೆಪ್ಟೆಂಬರ್ 25ರಂದು ಜರುಗಿತು.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದರು. ಸುಮಾರು ₹85 ಲಕ್ಷ ವೆಚ್ಚದಲ್ಲಿ ಕಣಜಾರು ಪರಿಸರದ ಜನರ ಅಗತ್ಯಗಳಿಗೆ ತಕ್ಕಂತೆ ಆರೋಗ್ಯ ಉಪಕೇಂದ್ರ ನಿರ್ಮಾಣಗೊಳ್ಳಲಿದ್ದು, 24 ಗಂಟೆಗಳ ಡ್ಯೂಟಿ ನರ್ಸ್ ಸೇವೆ, ವಾರದಲ್ಲಿ ಮೂರು ದಿನ ವೈದ್ಯರ ಸೇವೆ ಮತ್ತು ಮೂರು ಬೆಡ್ ಸೌಲಭ್ಯಗಳೊಂದಿಗೆ ಇದು ಗ್ರಾಮಸ್ಥರಿಗೆ ಲಭ್ಯವಾಗಲಿದೆ.
ಅದೇ ರೀತಿ ಆರ್ಐಡಿಎಫ್ 30ರ ಯೋಜನೆಯಡಿ ₹50 ಲಕ್ಷ ವೆಚ್ಚದಲ್ಲಿ ಪಳ್ಳಿ ಕ್ರಾಸ್ ಬಳಿ ಪಶು ಆಸ್ಪತ್ರೆ ನಿರ್ಮಾಣಗೊಂಡು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಇದೇ ಸಂದರ್ಭದಲ್ಲಿ ಪಂಚಾಯತ್ ಉಪಕೇಂದ್ರ ಕಟ್ಟಡದ ಉದ್ಘಾಟನೆಯೂ ನೆರವೇರಿತು.
ಈ ಸಂದರ್ಭದಲ್ಲಿ ನೀರೆ ಗ್ರಾ.ಪಂ ಅಧ್ಯಕ್ಷ ಸಚ್ಚಿದಾನಂದ ಪ್ರಭು, ಉಪಾಧ್ಯಕ್ಷೆ ವಿದ್ಯಾ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್, ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಹೆಗ್ಡೆ, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ನಾಯಕ್, ಉದ್ಯಮಿ ಚಂದ್ರಶೇಖರ್ ಮಾಡ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ, ಬೈಲೂರು ವೈದ್ಯರು ಡಾ. ಮಹಂತ್ ಹೆಗ್ಡೆ, ಪಶು ಸಂಗೋಪನೆ ಇಲಾಖೆಯ ಅರುಣ್, ಗುತ್ತಿಗೆದಾರರು ಹರೀಶ್ ಶೆಟ್ಟಿ ಮತ್ತು ವಿನಯ ಕುಮಾರ್ ಶೆಟ್ಟಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗುರುರಾಜ ಮಂಜಿತ್ತಾಯರವರು ಶಿಲಾನ್ಯಾಸದ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.



































