
ಉಡುಪಿ : ಉಡುಪಿ ಜಿಲ್ಲೆಯ ಪರ್ಕಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪತ್ತೆಯಾಗಿರುವ ಘಟನೆ ಮತ್ತೆ ವರದಿಯಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಮಣಿಪಾಲ, ಪರ್ಕಳ, ಪೆರಂಪಳ್ಳಿ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಈಗ ಪುನಃ ಚಿರತೆ ಕಾಣಿಸಿಕೊಂಡಿದೆ ಎಂಬ ಮಾಹಿತಿ ಶುಕ್ರವಾರ ಸ್ಥಳೀಯರಿಂದ ಬಂದಿದ್ದು, ಅದೇ ಭೀತಿ ಮತ್ತೆ ಮೂಡಿದಂತಾಗಿದೆ.

ಪರ್ಕಳದ ಬ್ರಹ್ಮ ಬೈದರ್ಕಳ ಗರೋಡಿ – ಹೆರ್ಗ ಸಂಪರ್ಕ ರಸ್ತೆಯಲ್ಲಿನ ನಿವಾಸಿ ತಿಳಿಸಿದಂತೆ, ಚಿರತೆಯೊಂದು ಹಗಲು ಹೊತ್ತಿನಲ್ಲಿ ಮನೆಯ ಕೋಳಿ ಮತ್ತು ನಾಯಿಯನ್ನು ಎಳೆದೊಯ್ಯುವ ದೃಶ್ಯ ಕಂಡುಬಂದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಕೂಡ ದೂರು ನೀಡಲಾಗಿದ್ದು, ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿರತೆ ರಸ್ತೆಯಲ್ಲಿ ದಾಟುತ್ತಿರುವ ದೃಶ್ಯವೊಂದು ಕಣ್ಣಿಗೆ ಬಿದ್ದಿದೆಯಾದರೂ, ವಸತಿ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾವುದೇ ದೃಶ್ಯ ದಾಖಲಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ಮತ್ತೆ ಆತಂಕ ಹುಟ್ಟಿಸಿರುವ ಈ ಪ್ರಕರಣದ ಹಿನ್ನೆಲೆಯಿಂದ, ಅರಣ್ಯ ಇಲಾಖೆಯು ಹೆಚ್ಚಿನ ನಿಗಾವಹಿಸಲು ಮುಂದಾಗಿದೆ.